ಹುಬ್ಬಳ್ಳಿ: ‘ಮಹದಾಯಿ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ನೈತಿಕ ಹಕ್ಕಿಲ್ಲ. ಮಹದಾಯಿ ನೀರನ್ನು ಕರ್ನಾಟಕಕ್ಕೆ ತರುವ ಕಾಲುವೆಗೆ ಗೋಡೆ ಕಟ್ಟಿರುವುದೇ ಕಾಂಗ್ರೆಸ್ನ ದೊಡ್ಡ ಸಾಧನೆ. ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಕಾಮಗಾರಿ ಪ್ರಾರಂಭವಾಗಿದ್ದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾನು ನೀರಾವರಿ ಸಚಿವನಾಗಿದ್ದಾಗ 5.5 ಮೀಟರ್ಗಳಷ್ಟು ಕಾಲುವೆ ನಿರ್ಮಾಣವಾಯಿತು. ಆದರೆ, ಕಾಂಗ್ರೆಸ್ ಪುಣ್ಯಾತ್ಮರು ಏನು ಮಾಡಿದರು? ಸೋನಿಯಾ ಗಾಂಧಿ ಅವರು ಗೋವಾದಲ್ಲಿ ಒಂದು ಹನಿ ನೀರನ್ನು ತಿರುಗಿಸಲು ಬಿಡುವುದಿಲ್ಲ ಎಂದಿದ್ದರು. ನಾವು ನಿರ್ಮಿಸಿದ್ದ ಕಾಲುವೆಗೆ ಅವರ ಕಾಲದಲ್ಲಿ ಗೋಡೆ ಕಟ್ಟಿದರು’ ಎಂದು ಟೀಕಿಸಿದರು.
ಗಡಿ ವಿವಾದ- ವ್ಯಾಖ್ಯಾನಿಸುವುದಿಲ್ಲ: ‘ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆಗೂ ಮುನ್ನ ಹಲವು ವರದಿಗಳು ಬಂದಿವೆ. ಅಂತಿಮವಾಗಿ ಕಾಯ್ದೆ ರೂಪುಗೊಂಡಿದೆ. ಇದು ಈಗಿನ ಕಾನೂನಿನ ವಸ್ತುಸ್ಥಿತಿ. ಸದ್ಯದ ಸ್ಥಿತಿಯನ್ನೇ ಉಳಿಸಿಕೊಳ್ಳಬೇಕೊ ಬೇಡವೊ ಎಂಬುದನ್ನು ಸುಪ್ರೀಂ ಕೋರ್ಟ್ ಇನ್ನೂ ತೀರ್ಮಾನಿಸಿಲ್ಲ. ಕೋರ್ಟ್ನಲ್ಲಿ ಪ್ರಕರಣವಿರುವಾಗ ವ್ಯಾಖ್ಯಾನ ಮಾಡುವುದಿಲ್ಲ’ ಎಂದು ಗಡಿ ವಿವಾದ ಕುರಿತು ಬೊಮ್ಮಾಯಿ ಪ್ರತಿಕ್ರಿಯಿಸಿದರು.