ಕುಷ್ಟಗಿ: ಡಿ.1ರಿಂದ ಕಣ್ಮರೆಯಾಗಿದ್ದ ಕುಷ್ಟಗಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು, ಸಾಮಾಜಿಕ ಜಾಲತಾಣ ಸುಳಿವಿನಿಂದ ಪತ್ತೆ ಹಚ್ಚಿರುವ ಮಾಹಿತಿ ಪೋಲಿಸ್ ಮೂಲಗಳು ದೃಢಪಡಿಸಿವೆ.
ಡಿ.1 ರ ಬೆಳಗ್ಗೆ ಅವರ ಸ್ವಗ್ರಾಮ ಹಿರೇಅರಳಹಳ್ಳಿ (ಯಲಬುರ್ಗಾ) ಗ್ರಾಮದಿಂದ ಅವರ ಪರಿಚಯಸ್ಥ ಹನುಮಂತ ಕೊಂಡಗುರಿ ಬೈಕಿನಲ್ಲಿ ಕುಷ್ಟಗಿ ಬಸ್ ನಿಲ್ದಾಣದವರೆಗೂ ಬಂದಿಳಿದು, ಅಲ್ಲಿಂದ ಕಣ್ಮರೆಯಾಗಿದ್ದರು.
ಮನೆಯಲ್ಲಿ ತಮ್ಮ ಎರಡು ಮೋಬೈಲ್ ಬಿಟ್ಟು ಹೋದವರು ಸಂಜೆಯಾದರೂ ಮನೆಗೆ ಮರಳದೇ ಇರುವುದು ಕುಟುಂಬದವರು ಆತಂಕಿತರಾಗಿದ್ದರು. ಮಂತ್ರಾಲಯ ಸೇರಿದಂತೆ ಇತ್ಯಾಧಿ ಸ್ಥಳಗಳಲ್ಲಿ ಸಿಗದೇ ಇದ್ದಾಗ ಪತ್ನಿ ವಿದ್ಯಾಶ್ರೀ ಡಿ.6 ರಂದು ದೂರು ನೀಡಿದ್ದರು.
ತನಿಖೆ ಚುರುಕು
ಈ ಹಿನ್ನೆಲೆಯಲ್ಲಿ ಕೊಪ್ಪಳ ಎಸ್ಪಿ ಅರುಣಾಂಗ್ಷುಗಿರಿ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ನೇತೃತ್ವದಲ್ಲಿ ಪಿಎಸೈ ಮೌನೇಶ ರಾಠೋಡ್ ಅವರು ಕಣ್ಮರೆಯಾದ ಕೃಷಿ ಅಧಿಕಾರಿ ಪತ್ತೆಗೆ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು.
ಸಾಮಾಜಿಕಜಾಲತಾಣ ಸುಳಿವು
ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾದ ಈ ಮಾಹಿತಿ ನೆರವಿನಿಂದ ಸ್ಥಳೀಯರು, ಬೆಂಗಳೂರಿನಲ್ಲಿ ಏಕಾಂಗಿಯಾಗಿ, ಮಾನಸಿಕ ಖಿನ್ನರಾಗಿ ಅಲೆದಾಡುತ್ತಿದ್ದ ಕೃಷಿ ಅಧಿಕಾರಿಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆ ಕಳೆದ ವಾರದಿಂದ ಸೃಷ್ಟಿಯಾದ ಆತಂಕ ಮಂಜಿನಂತೆ ಕರಗಿದ್ದು, ಈ ದಿನ (ಗುರುವಾರ) ಸಂಜೆ ವೇಳೆಗೆ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಕುಷ್ಟಗಿ ತಲಪುವ ಮಾಹಿತಿ ಲಭ್ಯವಾಗಿದೆ.