ಬೆಳಗಾವಿ ಜಿಲ್ಲೆಯಲ್ಲಿ ಛಲವಾದಿ ಸಮಾಜದ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದ್ದರೂ ಕೂಡ ಒಬ್ಬರೂ ಶಾಸಕರು ಇರದೇ ಇರುವುದು ನಮ್ಮ ದುರ್ದೈವ. ಸಂಘಟಿತರಾಗದಿದ್ರೆ ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಬರುವುದಿಲ್ಲ ಎಂದು ಹುಬ್ಬಳ್ಳಿ ಕಾಂಗ್ರೆಸ ಶಾಸಕ ಪ್ರಸಾದ ಅಬ್ಬಯ್ಯ ಕರೆ ನೀಡಿದರು.
ರವಿವಾರ ನಗರದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಛಲವಾದಿ ಸಮಾಜದ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ ಟಿಕೆಟ್ ಸಿಕ್ಕರೂ ವ್ಯವಸ್ಥಿತವಾಗಿ ನಮ್ಮನ್ಮು ಮುಗಿಸುತ್ತಿದ್ದಾರೆ. ನಮ್ಮ ಸಮಾಜ ಒಗ್ಗಟ್ಟಾಗದಿದ್ರೆ ನಮಗೆ ರಾಜಕೀಯ ಶಕ್ತಿ ಬರುವುದಿಲ್ಲ. ಸಮಾಜದ ಸಂಘಟನೆ ಆಗುತ್ತಿಲ್ಲ.
ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ನಮ್ಮನ್ನು ಶೋಷಿತರನ್ನಾಗಿ ಮಾಡಿದ್ದಾರೆ. ಬಾಬಾಸಾಹೇಬರು ಹುಟ್ಟದೇ ಇದ್ದರೆ ನಾವು ಇಂದು ಈ ಸ್ಥಾನಮಾನದಲ್ಲಿ ಇರುತ್ತಿರಲಿಲ್ಲ.
ಬಾಬಾಸಾಹೇಬರು ವಿಷವುಂಡು ಸಮಾಜಕ್ಕೆ ಅಮೃತ ಉಣಿಸಿದ್ದಾರೆ. ಆದರೆ ನಾವು ಅಮೃತ ಉಂಡು ಸಮಾಜಕ್ಕೆ ವಿಷ ಕಕ್ಕುತ್ತಿದ್ದೇವೆ. ದಿನಗಟ್ಟಲೇ ಭಾಷಣ ಮಾಡುತ್ತೇವೆ ಆದರೆ ಬಾಬಾಸಾಹೇಬರ ವಿರುದ್ಧದ ಸಿದ್ಧಾಂತಗಳನ್ನು ಆಚರಿಸುತ್ತಿದ್ದೇವೆ. ಇತಿಹಾಸ ಬದಲಿಸುವ ಹುನ್ನಾರ ನಡೆಸಿದ್ದಾರೆ. ಖಾಸಗೀಕರಣ ಮೂಲಕ ಶಿಕ್ಷಣ, ಆರೋಗ್ಯ ಸೇವೆ ನಮಗೆ ಸಿಗದಂತೆ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವೆಲ್ಲಾ ಜಾಗೃತರಾಗಬೇಕು, ಸಂಘಟಿತರಾಗಬೇಕು ಎಂದರು.