ಬಳ್ಳಾರಿ: ರಾಜಕೀಯದಲ್ಲಿ ದಲಿತರಿಗೆ ಉನ್ನತ ಸ್ಥಾನ ಕೊಡೋದು ಬಿಜೆಪಿ ಮಾತ್ರ, ಬೇರೆ ಯಾರಿಗೂ ಇದು ಸಾಧ್ಯವಿಲ್ಲ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಬಳ್ಳಾರಿಯಲ್ಲಿ ಆಯೋಜಿಸಿದ್ದ ಎಸ್ಟಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ನಡ್ಡಾ, ಬಿಜೆಪಿ ದಲಿತ ಮಹಿಳೆಯೊಬ್ಬರನ್ನು ರಾಷ್ಟಪತಿ ಮಾಡಿದೆ.
ಈ ಬಗ್ಗೆ ಯಾವ ಪಕ್ಷವೂ ಚಿಂತನೆ ಮಾಡಿರಲಿಲ್ಲ. ಕಾಂಗ್ರೆಸ್ಗೆ ದಲಿತರು ಯಾಕೆ ನೆನಪಾಗಲಿಲ್ಲ? ಯಾಕೆ ಉನ್ನತ ಸ್ಥಾನ ನೀಡಲಿಲ್ಲ? ದಲಿತರ ಪರ ಮೊದಲು ಯಡಿಯೂರಪ್ಪ ಕೆಲಸ ಮಾಡಿದ್ರು. ನಂತರ ಇದೀಗ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡಿ ಗೌರವ ಕೊಟ್ಟರು. ಈ ಹಿಂದೆ ಕಾಂಗ್ರೆಸ್ಗೆ ಸರ್ಕಾರಕ್ಕೆ ದಲಿತರು ಮತ್ತು ಶೋಷಿತರ ಬಗ್ಗೆ ಕನಿಷ್ಠ ಕಾಳಜಿ ಇರಲಿಲ್ಲ. ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಬಳಸಿಕೊಂಡರು. ಯಾವುದೇ ಉನ್ನತ ಸ್ಥಾನವನ್ನು ನೀಡಲಿಲ್ಲ ಎಂದು ಟೀಕಿಸಿದರು.
ಕರ್ನಾಟಕ ಸರ್ಕಾರ ದಲಿತರು, ಆದಿವಾಸಿಗಳು, ಒಬಿಸಿ, ಬಡವರ ಪರ ಕೆಲಸ ಮಾಡ್ತಿದೆ. ಮುಂದಿನ ಚುನಾವಣೆಯಲ್ಲಿ ಇದೇ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋ ಜವಾಬ್ದಾರಿ ಜನರ ಮೇಲಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲೆ ನರೇಂದ್ರ ಮೋದಿ ಅವರ ಆಶೀರ್ವಾದ ಇದೆ, ಯಡಿಯೂರಪ್ಪ ಅವರ ಸಲಹೆ ಇದೆ ಎಂದು ಜೆ.ಪಿ.ನಡ್ಡಾ ಹೇಳಿದರು.