ಬೆಳಗಾವಿ: ‘ಪ್ರತಿದಿನವೂ ನಿಯಮಿತ ಹಾಗೂ ಸಮತೋಲನದ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ವಾಯುವಿಹಾರ, ಯಾವುದೇ ಒತ್ತಡ ಪರಿಸ್ಥಿತಿಯಲ್ಲಿಯೂ ಹೊರಗಿನ ಪದಾರ್ಥ ಸೇವಿಸದೇ ಇರುವುದೇ ನನ್ನ ಆರೋಗ್ಯದ ಗುಟ್ಟು. ಪೊಲೀಸ್ ಪಡೆ ಸೇರಿದವರು ಇಂಥ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ’ ಎಂದು ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಕಿವಿಮಾತು ಹೇಳಿದರು.
ನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಜ್ಜಾದ ಪೊಲೀಸರಿಗೆ ದಿನವೂ ಒತ್ತಡಗಳು ಇರುತ್ತದೆ. ಇದರ ಮಧ್ಯೆ ಉತ್ತರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅವಶ್ಯ. ನಿಯಮಿತ ಆಹಾರ ಹಾಗೂ
ವ್ಯಾಯಾಮ ಎರಡನ್ನೂ ಮರೆಯಬೇಡಿ’ ಎಂದರು.
ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕ್ರೀಡಾಕೂಟ ಒಂದು ವಿಶೇಷವಾಗಿದೆ. ದೈಹಿಕ ಹಾಗೂ ಮಾನಸಿಕ ಸದೃಢತೆ ಬಹಳ ಮುಖ್ಯವಾಗಿದೆ. ಸಾಮರ್ಥ ವೃದ್ಧಿ ಹಾಗೂ ತಂಡದ ಬಲವರ್ಧನೆ
ಗಾಗಿ ಎಲ್ಲರೂ ಕ್ರೀಡೆಗಳಲ್ಲಿ
ಆಸಕ್ತಿಯಿಂದ ಭಾಗವಹಿಸುವುದು ಮುಖ್ಯ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿಸಿಪಿಗಳಾದ ಸ್ನೇಹಾ ಪಿ.ವಿ., ರವೀಂದ್ರ ಗಡಾದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಕ್ರೀಡಾಪಟುಗಳ ಗುಂಪು ಹಾಗೂ ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಅವರು ಪೊಲೀಸ್ ವಂದನೆ ಸ್ವೀಕರಿಸಿದರು.