ಹುಬ್ಬಳ್ಳಿ: ಕೋವಿಡ್-19 ವೇಳೆ ಗ್ರಾ.ಪಂ.ಗಳಿಗೆ ಪರಿಕರ ಪೂರೈಸಿದ್ದ ಬಿಲ್ ಪಾವತಿಗೆ ಅಧಿಕಾರಿಗಳು ಶೇ.40ಕ್ಕಿಂತ ಹೆಚ್ಚಿನ ಕಮಿಷನ್ ಕೇಳಿ ಬಿಲ್ ತಡೆ ಹಿಡಿದಿದ್ದಾರೆ. ಈಗ ತಾನು ಸಾಲದಿಂದ ಕಂಗೆಟ್ಟಿದ್ದು, ಆದ್ದರಿಂದ ದಯಾಮರಣಕ್ಕೆ ಅವಕಾಶ ನೀಡುವಂತೆ ನಗರದ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಕೇಶ್ವಾಪುರ ಸುಳ್ಳ ರಸ್ತೆ ಮನೋಜ ಪಾರ್ಕ್ ನಿವಾಸಿ, ಗುತ್ತಿಗೆದಾರ ಬಸವರಾಜ ಅಮರಗೋಳ ಅವರು ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. 2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪತ್ರದ ಅನುಸಾರ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗ್ರಾ.ಪಂ.ಗಳಿಗೆ 85 ಲಕ್ಷ ರೂ. ಹಾಗೂ ಮೂಡಿಗೆರೆ ತಾಲೂಕಿಗೆ 27 ಲಕ್ಷ ರೂ.ಗಳ ಕೋವಿಡ್ ಪರಿಕರಗಳನ್ನು ಪೂರೈಸಿದ್ದೆ. ಎರಡು ವರ್ಷ ಕಳೆದರೂ ತಾ.ಪಂ. ಇಒ ಬಿಲ್ ಮಂಜೂರು ಮಾಡಿಲ್ಲ. ಬಿಲ್ ಮಂಜೂರು ಮಾಡಲು ಶಾಸಕರು ಸಹಿತ ಬೇರೆ ಬೇರೆ ಹೆಸರಲ್ಲಿ ಶೇ.30-40 ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಕಿ ಬಿಲ್ ಹಣ ಪಾವತಿಸುವಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ಪಂಚಾಯತ್ರಾಜ್ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅವರಿಂದಲೂ ಅಧಿಕಾರಿಗಳಿಗೆ ನಿರ್ದೇಶನ ಬಂದಿದೆ. ಆದರೂ ಅಧಿಕಾರಿಗಳು ಬಿಲ್ ಮಂಜೂರು ಮಾಡಿಲ್ಲ. ಸಾಲಗಾರರ ಕಾಟದಿಂದ ಬೇಸತ್ತು ಹೋಗಿದ್ದು, ಮಾನಸಿಕವಾಗಿ ಜರ್ಝರಿತನಾಗಿದ್ದೇನೆ ಎನ್ನುತ್ತಿರುವ ಅವರು, ರಾಷ್ಟ್ರಪತಿಗಳಿಗೆ ಎಲ್ಲ ದಾಖಲೆ ಮತ್ತು ಪರ್ಸೆಂಟೇಜ್ಗಾಗಿ ಬೇಡಿಕೆ ಇಟ್ಟ ಆಡಿಯೋ ರೆಕಾರ್ಡ್ ಅನ್ನು ರಿಜಿಸ್ಟರ್ ಅಂಚೆ ಮೂಲಕ ಕಳುಹಿಸಿದ್ದಾರೆ.