ಇಬ್ಬರು ಪುಟ್ಟ ಕಂದಮ್ಮಗಳು, ಮೂರನೇ ಕೂಸು ಹೊಟ್ಟೆಯಲ್ಲಿತ್ತು. ದುಡಿದೋ ಹಾಕೋ ಶಕ್ತಿ ಗಂಡನ (Husband) ರೆಟ್ಟೆಯಲ್ಲಿತ್ತು. ಇಂತಹ ಸುಂದರ ಸಂಸಾರದ ಮೇಲೆ ಬಡಿದ ಬರಸಿಡಿಲು ಲವ್ ಬರ್ಡ್ ಕನಸನ್ನು ನುಚ್ಚು ನೂರು ಮಾಡಿದೆ. ಮೊದಲು ಗಂಡನ ಹತ್ಯೆಯಾಗುತ್ತೆ (Husband Murder), ನಂತರ ಹೆಂಡತಿಯೂ ಆತ್ಮಹತ್ಯೆಗೆ ಶರಣಾಗ್ತಾಳೆ. ಇಬ್ಬರು ಮಕ್ಕಳು ತಬ್ಬಲಿಯಾಗುತ್ತವೆ. ಕೊನೆಗೆ ಕೊಲೆಯಾದವನ ಮನೆಯವರ ಮೇಲೆಯೇ ಕೇಸ್ ಬುಕ್ ಮಾಡಲಾಗುತ್ತೆ. ಗ್ರಾ.ಪಂ. ಸದಸ್ಯನೋರ್ವನ ಕೊಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದು ದುರುಂತ ಅಂತ್ಯ ಕಂಡಿದೆ.
ದೀಪಕ್ ಪಟದಾರಿ, ಪುಷ್ಪ ದಂಪತಿಯ ಪ್ರೀತಿ ದುರಂತ ಅಂತ್ಯ ಕಂಡಿದೆ. ದೀಪಕ್ ಪಟದಾರಿ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮ ಪಂಚಾಯತಿ ಸದಸ್ಯನಾಗಿದ್ದರು. ಕಳೆದ ಜುಲೈ ನಾಲ್ಕರಂದು ದೀಪಕ್ ಪಟದಾರಿಯನ್ನು ರಾಯನಾಳ ಗ್ರಾಮದ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ಹಿಂದೆ ಪುಷ್ಪ ತವರು ಮನೆಯವರ ಕೈವಾಡ ಇದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ
ಪಕ್ಕಾ ಬಿಜೆಪಿ ಕಾರ್ಯಕರ್ತ ಮತ್ತು ಗಂಗಿವಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಪಟದಾರಿ ರಾಯನಾಳ ಗ್ರಾಮದ ಪ್ರತಿಷ್ಠಿತ ಮೇಟಿ ಕುಟುಂಬ ಮಗಳು ಪುಷ್ಪ ಅವರನ್ನ ಪೋಷಕರ ವಿರೋಧದ ನಡುವೆಯೂ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ದೀಪಕ್ ಮತ್ತು ಪುಷ್ಪ ದಂಪತಿಗೆ ಎರಡು ಮಕ್ಕಳು ಸಹ ಇವೆ. ಮತ್ತೊಂದು ಕಡೆ ರಾಜಕೀಯವಾಗಿ ಪ್ರಬಲವಾಗಿ ಬೆಳೆಯುತ್ತಿದ್ದ ದೀಪಕ್ ತನ್ನ ಮಾವನ ಕುಟುಂಬ ಅಂದರೆ ಪುಷ್ಪ ಕುಟುಂಬ ಬೆಂಬಲಿತ ಗ್ರಾಮ ಪಂಚಾಯತಿ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು.
ನಡು ಗ್ರಾಮದಲ್ಲಿಯೇ ಕೊಚ್ಚಿ ಕೊಲೆ
ದೀಪಕ್ ಮೇಲೆ ಮೊದಲೇ ಕೋಪಗೊಂಡಿದ್ದ ಪುಷ್ಪ ತವರು ಮನೆಯವರು, ಅಳಿಯ ಏಳಿಗೆಯನ್ನು ಸಹಿಸಲಾರದೆ, ಜುಲೈ 4 ರಾತ್ರಿ ರಾಯನಾಳ ನಡು ಗ್ರಾಮದಲ್ಲಿ ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿದೆ.
ದೀಪಕ್ ಹತ್ಯೆಗೆ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜಪ್ಪ ಮಲ್ಲಪ್ಪ ಹೆಗ್ಗಣ್ಣವರ, ಪ್ರವೀಣ್ ಮುದಲಿಂಗಣ್ಣವರ, ಚಂದ್ರಶೇಖರ್ ಮುದಲಿಂಗಣ್ಣವರ, ಮಲ್ಲಿಕಾರ್ಜುನ್ ಶಂಕ್ರಪ್ಪ ಮೇಟಿ, ಶಿವಪ್ಪ ರೇವಣಪ್ಪ ಮೇಟಿ, ಪರಶುರಾಮ ಬಸಪ್ಪ ಮೇಟಿ, ಯಲ್ಲಪ್ಪ ಬಸಪ್ಪ ಮೇಟಿ ಎಂಬುವವರೇ ಕಾರಣ ಅಂತ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೊಲೆಯಾದ ದೀಪಕ್
ಪೊಲೀಸರು ಇಲ್ಲಿಯವರೆಗೆ ಕೇವಲ 6 ಜನ ಆರೋಪಿಗಳನ್ನು ಬಂಧಿಸಿದ್ದು, 3 ಜನ ಮುಖ್ಯ ಆರೋಪಿಗಳಾದ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜಪ್ಪ ಮಲ್ಲಪ್ಪ ಹೆಗ್ಗಣ್ಣವರನ್ನು ಬಂಧಿಸಿಲ್ಲ ಅಂತ ಆರೋಪಿಸಲಾಗಿತ್ತು.