ಬೆಂಗಳೂರು: ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಇ ಕಚೇರಿ ಕಡ್ಡಾಯಗೊಳಿಸಲಾಗಿದೆ. ಇ-ಕಚೇರಿಯನ್ನೇನೋ ಕಡ್ಡಾಯಗೊಳಿಸಿದೆ ಆದರೆ ಅದಕ್ಕೆ ಬೇಕಾಗಿರುವ ಸ್ಕ್ಯಾನರ್ ಮತ್ತು ಪ್ರಿಂಟರ್ಗಳನ್ನು ಪೂರೈಸಲು ಸರ್ಕಾರ ಮರೆತಿದೆ.
ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಅದರ ನಿದರ್ಶನವಾಗಿ ಇ-ಆಡಳಿತ ಕೇಂದ್ರದ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಎಲ್ಲಾ ಇಲಾಖೆಗಳಲ್ಲಿ ಇ ಕಚೇರಿಯನ್ನು ಕಡ್ಡಾಯಗೊಳಿಸಿದೆ.
2018ರಿಂದ ಇ-ಕಚೇರಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕಡತಗಳ ತ್ವರಿತ ವಿಲೇವಾರಿ, ಸಮಯ ಉಳಿತಾಯ, ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕೆ ಹೆಚ್ಚಳ ಜೊತೆಗೆ ಸಾರ್ವಜನಿಕರಿಗೆ ಸೇವೆಯನ್ನು ಬೇಗನೆ ನೀಡುವ ಉದ್ದೇಶದಿಂದ ಇ-ಕಚೇರಿಯನ್ನು ಜಾರಿಗೆ ತರಲಾಗಿದೆ. ಸಚಿವಾಲಯದ ಎಲ್ಲಾ ಸಚಿವರ ಕಚೇರಿಗಳಲ್ಲಿ ಇ-ಕಚೇರಿ ಕಡ್ಡಾಯವಾಗಿ ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ. ಎಲ್ಲಾ ಪತ್ರ ವ್ಯವಹಾರ, ಅರ್ಜಿ ಸ್ವೀಕಾರ, ಅವುಗಳ ವಿಲೇವಾರಿಯನ್ನು ಇ-ಕಚೇರಿಯಡಿ ಕಡ್ಡಾಯವಾಗಿ ಮಾಡಬೇಕಾಗಿದೆ.
ಸ್ಕ್ಯಾನರ್ ಪ್ರಿಂಟರ್ಗಳ ಕೊರತೆ: ಇ-ಕಚೇರಿಯನ್ನೇನೋ ರಾಜ್ಯ ಸರ್ಕಾರ ಹಂತ ಹಂತವಾಗಿ ಜಾರಿಗೆ ತರುತ್ತಿದೆ. ಇ-ಕಚೇರಿಯನ್ನು ಕಡ್ಡಾಯಗೊಳಿಸಿ ಆದೇಶವನ್ನೂ ಹೊರಡಿಸಿದೆ. ಆದರೆ ವಿಪರ್ಯಾಸ ಅಂದರೆ ಸರ್ಕಾರ ಇ-ಕಚೇರಿಯ ಕಾರ್ಯನಿರ್ವಹಣೆಗೆ ಬೇಕಾಗಿರುವಷ್ಟು ಸ್ಕ್ಯಾನರ್ ಹಾಗೂ ಪ್ರಿಂಟರ್ ಪೂರೈಕೆ ಮಾಡಲು ವಿಫಲವಾಗಿದೆ.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಜೊತೆಗೆ ಸರ್ಕಾರಿ ನೌಕರರು ನಡೆಸಿದ ಸಭೆಯಲ್ಲಿ ಇ-ಕಚೇರಿ ಪದ್ಧತಿಗಾಗಿ ಸ್ಕ್ಯಾನರ್ ಹಾಗೂ ಪ್ರಿಂಟರ್ಗಳನ್ನು ಪೂರೈಕೆ ಮಾಡದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಜುಲೈನಲ್ಲಿ ನಡೆದ ಸಭೆಯಲ್ಲಿ ಸಚಿವಾಲಯದ ನೌಕರರು, ಇ-ಆಫೀಸ್ ಪದ್ಧತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಹಲವಾರು ಇಲಾಖೆಗಳಲ್ಲಿ ಅವಶ್ಯವಿರುವಷ್ಟು ಪ್ರಿಂಟರ್ ಹಾಗೂ ಸ್ಕ್ಯಾನರ್ಗಳನ್ನು ಒದಗಿಸಿಲ್ಲದಿರುವುದರಿಂದ ತ್ವರಿತಗತಿಯಲ್ಲಿ ಕಲಸಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿರುವುದಾಗಿ ಗಮನಕ್ಕೆ ತರಲಾಯಿತು.