ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ನಾಲ್ಕು ವಿಧೇಯಕಗಳನ್ನು ಪ್ರತಿಪಕ್ಷಗಳ ಧರಣಿ ನಡುವೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ಮಾಡಲಾಗಿದ್ದು, ಕಲಾಪವನ್ನು ಅನಿರ್ದಿಷ್ಟಾವದಿಗೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ ಶೂನ್ಯವೇಳೆ ಕಲಾಪ ಮುಗಿಯುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ನಿನ್ನೆ ಗದ್ದಲದ ನಡುವೆ ಮಾಣಿಪ್ಪಾಡಿ ವರದಿ ಮಂಡಿಸಿದ್ದಾರೆ. ನಮಗೆ ಅದರ ಪ್ರತಿ ಕೊಡಿ ಎಂದು ಮಾಣಿಪ್ಪಾಡಿ ವರದಿ ಕುರಿತು ನಿಯಮ 59 ರ ಅಡಿ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಚರ್ಚೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿದರು. ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಈ ವೇಳೆ ಮಾತನಾಡಿದ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ಕಾಂಗ್ರೆಸ್ ನಿಲುವಳಿ ಸೂಚನೆ ಪರಿಶೀಲಿಸಿದ್ದೇನೆ. ಮಾಣಿಪ್ಪಾಡಿ ವರದಿ ಸ್ಥಾಯಿ ಸಮಿತಿ ನೀಡಿದ ವರದಿಯಲ್ಲ. ಅಲ್ಪಸಂಖ್ಯಾತ ಆಯೋಗದ ಕಾಯ್ದೆಯಂತೆ ಮಂಡಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಘಟನೆಯಲ್ಲ. ಹಾಗಾಗಿ ನಿಯಮ 59 ರ ನಿಲುವಳಿ ಸೂಚನೆ ತಿರಸ್ಕಾರ ಮಾಡುತ್ತೇನೆ ಎಂದು ರೂಲಿಂಗ್ ನೀಡಿದರು. ವರದಿಯನ್ನು ಸದಸ್ಯರಿಗೆ ನೀಡುವಂತೆ ಸೂಚಿಸಿದರು. ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.