ಬೆಂಗಳೂರು ಗ್ರಾಮಾಂತರ: ಬಸ್ಗಾಗಿ ಕಾಯುತ್ತ ನಿಂತಿದ್ದ ಅಜ್ಜಿಯೊಬ್ಬರ ಕೊರಳಿಗೆ ಕೈಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಹೋದ ಸರಗಳ್ಳಿಯೊಬ್ಬಳು ಗಟ್ಟಿಗಿತ್ತಿ ಅಜ್ಜಿಯ ಬಿಗಿಪಟ್ಟಿಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದಾಳೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಧುರೆ ಹೋಬಳಿ ಕನಸವಾಡಿಯಲ್ಲಿ ಗುರುವಾರ ಈ ಪ್ರಕರಣ ನಡೆದಿದ್ದು, ಸರಗಳ್ಳಿ ಈಗ ದೊಡ್ಡಬೆಳವಂಗಲ ಠಾಣೆ ಪೊಲೀಸರ ಅತಿಥಿಯಾಗಿದ್ದಾಳೆ.
ಸರ ನಾಲ್ಕೈದು ತುಂಡಾದರೂ ಒಂದೂ ತುಂಡು ಕೂಡ ಕಳ್ಳಿಯ ಪಾಲಾಗದಂತೆ ನೋಡಿಕೊಂಡ ಅಜ್ಜಿ ಎದೆಗಾರಿಕೆಗೆ ಹಾಗೂ ಸಮಯಪ್ರಜ್ಞೆಗೆ ಪೊಲೀಸರು ಸೆಲ್ಯೂಟ್ ಹೊಡೆದಿದ್ದಾರೆ.
ಏನಿದು ಪ್ರಕರಣ?: ಹೆಸರುಘಟ್ಟ ಮೂಲದ 68 ವರ್ಷದ ರಾಜಮ್ಮ ಎಂಬುವರು ಕನಸವಾಡಿ ಬಸ್ನಿಲ್ದಾಣದಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ನಂದಿನಿ ಎಂಬ ಕಳ್ಳಿ ಅಜ್ಜಿಯನ್ನು ಮಾತಿಗೆಳೆದು ಆತ್ಮೀಯವಾಗಿ ವರ್ತಿಸಿದ್ದಾಳೆ. ಕೆಲ ಹೊತ್ತಿನ ಬಳಿಕ ಏಕಾಏಕಿ ಅಜ್ಜಿ ಕೊರಳಿಗೆ ಕೈಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಒಂದು ಕೈಯಲ್ಲಿ ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಅಜ್ಜಿ ಮತ್ತೊಂದು ಕೈಯಲ್ಲಿ ಕಳ್ಳಿಯ ಕೈ ಬಲವಾಗಿ ಹಿಡಿದುಕೊಂಡು ಕೂಗಿಕೊಂಡಿದ್ದಾರೆ. ಅಜ್ಜಿಯ ಹಿಡಿತದಿಂದ ಬಿಡಿಸಿಕೊಳ್ಳಲಾರದೆ ಕಳ್ಳಿ ಪತರಗುಟ್ಟಿಹೋಗಿದ್ದಾಳೆ. ಅಜ್ಜಿ ಕೂಗಿಗೆ ತಕ್ಷಣ ಓಡಿಬಂದ ಸ್ಥಳೀಯರು ಕಳ್ಳಿಯನ್ನು ಹಿಡಿದು ‘ಧರ್ಮದೇಟು’ ಕೊಟ್ಟಿದ್ದಾರೆ.
ಸಹಚರನೊಂದಿಗೆ ಕೃತ್ಯ: ಆರೋಪಿ ನಂದಿನಿ ಸಹಚರನೊಂದಿಗೆ ಬೈಕ್ನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಳು. ಸಹಚರ ಬೈಕ್ನಲ್ಲಿ ದೂರದಲ್ಲಿ ಕಾದುಕುಳಿತಿದ್ದರೆ ನಂದಿನಿ ಮಹಿಳೆಯನ್ನು ಮಾತಿಗೆಳೆದು ಕೈಚಳಕ ತೋರಿಸುತ್ತಿದ್ದಳು, ಬಳಿಕ ಇಬ್ಬರು ಬೈಕ್ನಲ್ಲಿ ಪರಾರಿಯಾಗುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.