ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ʻಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕುʼ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಎಫ್ಐಆರ್ ಗೆ ಕೋರ್ಟ್ ಆದೇಶ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಎಲ್ ಕೆ ಆಡ್ವಾಣಿ, ವಾಜಪೇಯಿಗಿಂತ ಡೊಡ್ಡವ್ರಾ ಅವರು? ಎಲ್ ಕೆ ಆಡ್ವಾಣಿ ಅವರ ಆದರ್ಶ ಪಾಲಿಸಲಿ. ಕೇಂದ್ರ ಸಂಸದೀಯ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ ನೀಡಲಿ’ ಎಂದು ಹೇಳಿದ್ದಾರೆ.
ಯಾರು ಎಷ್ಟೇ ದುಡ್ಡಿನ ಹುಲಿ, ರಾಜಾಹುಲಿ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ಹಿಂದೆ ಎಲ್ ಕೆ ಆಡ್ವಾಣಿ ಮೇಲೆ ಆರೋಪ ಕೇಳಿ ಬಂದಾಗ ಅವರು ಎಲ್ಲ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದರು ಎಂದು ನೆನಪಿಸಿದರು.
ಇನ್ನು ಕಾಂಗ್ರೆಸ್ ನವರಿಗೆ ಸಿಎಂ ಬೊಮ್ಮಾಯಿ ಅವರ ಭಯ ಇಲ್ಲ, ಯಡಿಯೂರಪ್ಪನವರ ಭಯ ಇಲ್ಲ. ಅವರಿಗೆ ನನ್ನ ಭಯ ಇದೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು. ಯತ್ನಾಳ್ ಎಲ್ಲಿ ಬಂದು ಬಿಡ್ತಾನೋ?. ಅನ್ನೋ ಭಯ ಅವರಿಗೆ ಇದೆ. ಯತ್ನಾಳ್ ಸಿಎಂ ಆದರೆ ಜೈಲಿಗೊಬ್ಬರು, ಕಾಡಿಗೆ ಒಬ್ಬರು ಹೋಗಬೇಕಾಗುತ್ತದೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ, ಸಂಡೇ ಅಷ್ಟೇ ಎಂದು ಡಿಕೆಶಿಗೆ ಕುಟುಕಿದ್ದಾರೆ.