ಶಿವಮೊಗ್ಗ: ಮುಖ್ಯಮಂತ್ರಿಯಾಗಬೇಕೆಂಬ ಕನಸು ಮಾಜಿ ಸಚಿವ ಉಮೇಶ್ ಕತ್ತಿ ಅವರಲ್ಲಿತ್ತು. ನಾನಲ್ಲದಿದ್ದರೆ ನನ್ನ ಮಗನಾದರೂ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದರು. ಸಿಎಂ ಆಗುವ ಅವರ ಕನಸು ಈಡೇರುವ ಮುನ್ನವೇ ನಮ್ಮನ್ನು ಅಗಲಿದ್ದಾರೆ. ಅವರ ಮಗನಾದರೂ ಭವಿಷ್ಯದಲ್ಲಿ ಸಿಎಂ ಆಗಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಶಿಸಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಉಮೇಶ್ ಕತ್ತಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಪದೇಪದೆ ಉಮೇಶ್ ಕತ್ತಿ ಹೇಳುತ್ತಿದ್ದರು. ಅದನ್ನು ಅವರು ಗಂಭೀರವಾಗಿ ಹೇಳುತ್ತಿದ್ದರೋ ಅಥವಾ ತಮಾಷೆ ಮಾಡುತ್ತಿದ್ದರೋ ಎಂಬುದು ಕೊನೆಗೂ ತಿಳಿಯಲೇ ಇಲ್ಲ ಎಂದರು.
ಉಮೇಶ್ ಕತ್ತಿ ಸ್ನೇಹಜೀವಿಯಾಗಿದ್ದರು. ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದರು. ನೊಂದವರಿಗೆ ಸಹಾಯಹಸ್ತ ನೀಡುತ್ತಿದ್ದರು. ಎಲ್ಲರ ಜೊತೆಗೆ ಹಾಸ್ಯ ಪ್ರಜ್ಞೆಯಿಂದ ವರ್ತಿಸುವ ವ್ಯಕ್ತಿತ್ವ ಅವರದ್ದಾಗಿತ್ತು. ಪಕ್ಷಾತೀತವಾಗಿ ಆತ್ಮೀಯರನ್ನು ಕತ್ತಿ ಹೊಂದಿದ್ದರು ಎಂದು ಹೇಳಿದರು.