ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದಿರುವುದನ್ನು ಒಪ್ಪಲಾಗದು.ಅದೇ ರೀತಿ ಸಿದ್ದರಾಮಯ್ಯ ಅವರು ಸಾರ್ವಕರ್ ಅವರ ಬಗ್ಗೆ ನೀಡಿದ ಹೇಳಿಕೆಯೂ ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. ನಾನು ಕೂಡ ತೀವ್ರವಾಗಿ ಖಂಡಿಸುತ್ತೇನೆ. ವೈಚಾರಿಕ ಭಿನ್ನಾಭಿಪ್ರಾಯ ಏನೇ ಇರಲಿ ಯಾರು ಲಕ್ಷ್ಮಣ ರೇಖೆ ದಾಟಬಾರದು, ಹಿಂಸಾಮಾರ್ಗ ಹಿಡಿಯಬಾರದು.ಇಂತಹ ಸಂಸ್ಕೃತಿ ಸಹಿಸಲಾಗದು. ಬಿಜೆಪಿ ಒಪ್ಪುವುದಿಲ್ಲ ಎಂದರು.
ಸಾರ್ವಕರ್ ಬಗ್ಗೆ ಹಗುರವಾಗಿ ಮಾತನಾಡುವ ಬದಲು ಸಿದ್ದರಾಮಯ್ಯ ಅವರು ಅವರದ್ದೇ ಪಕ್ಷದ ನಾಯಕಿ ಇಂದಿರಾಗಾಂಧಿ ಅವರು ಬರೆದ ಪತ್ರವಾದರು ಓದಲಿ, ಅವರ ದೇಶಭಕ್ತಿ ಬಗ್ಗೆ ತಿಳಿದುಕೊಳ್ಳಲಿ.ಮತ ತುಷ್ಠೀಕರಣಕ್ಕಾಗಿ ಸಿದ್ದರಾಮಯ್ಯ ಸಂಘ, ಸಂಘನಾಯಕರ ಬಗ್ಗೆ ಹಗುರವಾಗಿ ಹೇಳಿಕೆ ನೀಡುತ್ತಿದ್ದಾರೆ . ದೇಶದ ಎಲ್ಲ ಕಡೆ ಕಾಂಗ್ರೆಸ್ ಜನರಿಂದ ತಿರಸ್ಕರಿಸಲ್ಪಟ್ಟಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸು ಕಾಂಗ್ರೆಸ್ಸಿಗರದಾಗಿದೆ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.