ಕುಷ್ಟಗಿ: ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಘಾತವಾಗಿದ್ದು, 9 ದಿನಗಳ ಅಂತರದಲ್ಲಿ ತಾಯಿ ಮಗ ಸಾವಿನಲ್ಲಿ ಒಂದಾದ ಮನಕಲಕುವ ಘಟನೆ ನಡೆದಿದೆ.
ಕುಷ್ಟಗಿ ಪಟ್ಟಣದ 14ನೇ ವಾರ್ಡ್ ನ ಅಂಬೇಡ್ಕರ್ ನಗರದಲ್ಲಿ ರವಿಕುಮಾರ ದುರಗಪ್ಪ ಕೆಂಗಾರಿ ಲೋ ಬಿಪಿಯಿಂದ ಕಳೆದ ಆ.9ರಂದು ಅಕಾಲಿಕವಾಗಿ ನಿಧನರಾಗಿದ್ದರು.
ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಬುಧವಾರ ಶಿವಗಣಾರಾಧನೆ ಕಾರ್ಯಕ್ರಮ ಕ್ಕಾಗಿ ಬಂಧು ಬಾಂಧವರನ್ನು ಅಹ್ವಾನಿಸಿದ್ದರು.
ದಿವಂಗತ ರವಿಕುಮಾರ ಕೆಂಗಾರಿ ಶಿವಗಣಾರಾಧನೆಯ ಪೂಜೆಯ ಸಿದ್ದತೆಯ ಸಂಧರ್ಭದಲ್ಲಿ ಮಗನ ಅಗಲಿಕೆಯ ಕೊರಗಿನಲ್ಲಿದ್ದ ತಾಯಿಗೆ ಹೃದಯಘಾತವಾಗಿ ಕೊನೆಯುಸಿರೆಳದೆರು. ಕೆಂಗಾರಿ ಮನೆಯಲ್ಲಿ 9 ದಿನಗಳಲ್ಲಿ ಮಗ, ತಾಯಿಯ ಸಾವು ಸಂಭವಿಸಿದೆ.
ಈ ದುರ್ಘಟನೆಯಿಂದ ಇನ್ನೋರ್ವ ಹಿರಿಯ ಪುತ್ರ ಗಜೇಂದ್ರಗಡ ತಹಶೀಲ್ದಾರ ಆಗಿರುವ ರಜನೀಕಾಂತ ಕೆಂಗಾರಿಗೆ ಬಿಪಿ ಏರಿಳಿತವಾಗಿ ಆಸ್ಪತ್ರೆ ಸೇರಿದ ಬೆನ್ನಲ್ಲೇ ಅವರ ಸಹೋದರ ನಾಗರಾಜ ಕೆಂಗಾರಿ ಸಹ ಆಸ್ಪತ್ರೆಗೆ ದಾಖಲಾಗಿದ್ದು, ಸಕಾಲಿಕ ಚಿಕಿತ್ಸೆ ಹಿನ್ನೆಲೆಯಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ.