ಬೆಳಗಾವಿ: ಘಟಪ್ರಭಾ ನದಿಗೆ ನಿರ್ಮಿಸಲಾದ ಹಿಡಕಲ್ (ರಾಜಾ ಲಖಮಗೌಡ) ಜಲಾಶಯ ಶೇ. 94ರಷ್ಟು ಭರ್ತಿಯಾಗಿದ್ದು ಕೆಲವೇ ಗಂಟೆಗಳಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.
ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2175 ಅಡಿಗಳಿದ್ದು ಗುರುವಾರ ಬೆಳಗ್ಗ 8.30ರ ವೇಳೆಗೆ 2171.333 ಅಡಿ ನೀರಿದೆ. ಒಳಹರಿವಿನ ಪ್ರಮಾಣ 29133 ಕ್ಯೂಸೆಕ್ ಇರುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಘಟಪ್ರಭಾ ನದಿ ಪಾತ್ರದ ಜನರು ಜಾನುವಾರುಗಳೊಂದಿಗೆ ಸ್ಥಳಾಂತರಗೊಳ್ಳಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಹಿಡಕಲ್ ಡ್ಯಾಂ ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವಿಲುತೀರ್ಥದಿಂದಲೂ ನೀರು ಬಿಡುಗಡೆ:
ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದಿಂದಲೂ ಗುರುವಾರ 1000 ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಗೆ ಮಲಪ್ರಭಾ ನದಿಗೆ ನಿರ್ಮಿಸಿರುವ ಈ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಹೆಚ್ಚುವರಿ ನೀರನ್ನು ಬಿಡುಗಡೆಗೊಳಿಸಲಾಗಿದೆ. ಅಣೆಕಟ್ಟೆಯ ಕೆಳ ಭಾಗದ ಪ್ರದೇಶದಲ್ಲಿರುವ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಮಾಹಿತಿ ನೀಡಲಾಗಿದೆ.
ಖಾನಾಪುರ- ಹಲ್ದಾರಿ ಸೇತುವೆ ಮುಳುಗಡೆ:
ವ್ಯಾಪಕ ಮಳೆಗೆ ಖಾನಾಪುರ- ಹಲ್ದಾರಿ ಸೇತುವೆ ಮುಳುಗಡೆಯಾಗಿದ್ದು ಈ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಂಚಾರಿಗಳು ಸಾರ್ವಜನಿಕ ಸುರಕ್ಷತೆ ನಿಟ್ಟಿನಲ್ಲಿ ಖಾನಾಪುರ ಪೊಲೀಸರು ಸೇತುವೆಯ ಎರಡೂ ಕಡೆ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ. ಇಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನೇಮಿಸಲಾಗಿದೆ.