ಬೆಳಗಾವಿ: ಪಕ್ಷದಲ್ಲಿ ಬಹಳಷ್ಟು ಹಿರಿಯ ನಾಯಕರು ಸಿಎಂ ಸ್ಥಾನದ ಪೈಪೋಟಿಯಲ್ಲಿದ್ದಾರೆ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಸದ್ಯ ಪಕ್ಷ ಅಧಿಕಾರಕ್ಕೆ ತರಬೇಕು ಎಂಬುವುದೇ ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ್ಯಂತ ಪಕ್ಷ ಸಂಘಟನೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದೇವೆ. ಸಿಎಂ ಸ್ಥಾನ, ಸಮಯ ಬಂದಾಗ ನೋಡೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುವರ್ಣಸೌಧದಲ್ಲಿ ಪ್ರತಿ ಸಲ ಅಧಿವೇಶನ ನಡೆಯಬೇಕು. ಈ ಭಾಗದ ಸಮಸ್ಯೆಗಳ ಬಗೆ ಹರಿಸಲು ಸಹಕಾರಿಯಾಗಲಿ. ಇಷ್ಟೊಂದು ಖರ್ಚು ಮಾಡಿ ಸುವರ್ಣಸೌಧ ಕಟ್ಟಲಾಗಿದೆ ಅದರ ಸದುಪಯೋಗವಾಗಬೇಕು. ರಾಜ್ಯಮಟ್ಟದ ಇಲಾಖೆಗಳು ಸ್ಥಾಳಾಂತರಗೊಳ್ಳಬೇಕು ಎಂಬ ಜನರ ಬೇಡಿಕೆ ಇದೆ. ಆದ್ರೆ ಅಧಿಕಾರಿಗಳು ಸುವರ್ಣಸೌಧಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ನೆಪ ಹೇಳಿ ಅಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ಒಂದು ತಿಂಗಳ ಮಟ್ಟಿಗೆ ಬಂದು, ಯಾರಿಗೂ ಗೊತ್ತಿಲ್ಲದಂತೆ ಬೆಂಗಳೂರಿಗೆ ಹೊರಟಿದ್ದಾರೆ. ಜಿಲ್ಲಾ ಮಟ್ಟದ ಕಚೇರಿಗಳಿಗಾಗಿ ಜಿಲ್ಲಾಧಿಕಾರಿ ಕಚೇರಿ ಹಿಂದುಗಡೆ ಕಾಂಪ್ಲೆಕ್ಸ್ ಕಟ್ಟುವ ಯೋಜನೆ ಇದೆ. ಅದಾದರೆ ಎಲ್ಲ ಜಿಲ್ಲಾಮಟ್ಟದ ಕಚೇರಿಗಳಿಗೆ ಸಹಕಾರಿಯಾಗಿಲಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಿಜೆಪಿ ಆಂತರಿಕ ವಿಚಾರ, ಆ ಬಗ್ಗೆ ನಾವು ಪ್ರತಿಕ್ರಿಯಿಸಲ್ಲ. ನಮ್ಮದೇನಿದ್ದರು ಸರ್ಕಾರ ಆಡಳಿತ ಹೇಗೆ ನಡೆಸುತ್ತಿದೆ. ಸರ್ಕಾರ ವೈಫಲ್ಯಗಳ ಬಗ್ಗೆ ಧ್ವನಿ ಎತ್ತುವುದಷ್ಟೇ ನಮ್ಮ ಕೆಲಸ. ಜನ ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದು, ನಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತೇವೆ ಎಂದರು.
ಸಿಎಂ ಬದಲಾವಣೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ:
ಸರ್ಕಾರ ಯಾವತ್ತು ಬೀಳತ್ತೆ ಅಂತಾ ನಾವು ಕಾಯ್ದುಕೊಂಡು ಕುಳಿತುಕೊಳ್ಳಲಾಗುವುದಿಲ್ಲ. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಯಾವ ಸಂದರ್ಭದಲ್ಲಿಯೂ ಚುನಾವಣೆ ಬರಬಹುದು. ಕಾಂಗ್ರೆಸ್ ಟೀಂ ಹಗಲು ರಾತ್ರಿ ದುಡಿಯುತ್ತಿದೆ. ಸಿಎಂ ಬದಲಾವಣೆ, ನಮ್ಮ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ.ಅದು ಬಿಜೆಪಿ ಆಂತರಿಕ ಸಮಸ್ಯೆ ಎಂದಷ್ಟೇ ಹೇಳಿದರು.
ಅಧಿವೇಶನದಲ್ಲಿ 6 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ
ಭೂಸುಧಾರಣೆ, ಎಂಪಿಎಂಸಿ, ಕಾರ್ಮಿಕ ಹಾಗೂ ಕೋವಿಡ್ ಭಷ್ಟಾಚಾರ ಸೇರಿದಂತೆ 6 ಪ್ರಮುಖ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಮೊನ್ನೆ ನಡೆದ ಶಾಸಕಾಂಗ ಪಕ್ಷದಲ್ಲಿ ಚರ್ಚೆ ಮಾಡಿದ್ದೇವೆ. ಈ ಕುರಿತು ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು.