ರಾಯಚೂರು: ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಶನಿವಾರ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದು ಪಾಲಕರು ಭಾನುವಾರ ಮಹಿಳಾ ಪೊಲೀಸ್ ಠಾಣೆಗೆ ನೀಡಿದ್ದ ದೂರು, ಕೊನೆಗೂ ಸೋಮವಾರ ಸುಖಾಂತ್ಯ ಕಂಡಿದೆ.
ಹುಬ್ಬಳ್ಳಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ಗೆಳೆಯರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದು, ಪೊಲೀಸರು ವಾಪಸ್ ಕರೆತರುತ್ತಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿ ಓಡಾಡುತ್ತಿದ್ದ ವಿದ್ಯಾರ್ಥಿಗಳನ್ನು ರೈಲ್ವೆ ಭದ್ರತಾ ಸಿಬ್ಬಂದಿ ವಿಚಾರಿಸಿ, ಹುಬ್ಬಳ್ಳಿ ಶಹರ ಠಾಣೆಗೆ ಒಪ್ಪಿಸಿದ್ದರು. ಇದೀಗ ಅಲ್ಲಿಂದ ರಾಯಚೂರಿಗೆ ಕರೆತರಲಾಗುತ್ತಿದೆ. ಕುತೂಹಲಕ್ಕಾಗಿ ಹುಬಳ್ಳಿ ನೋಡುವುದಕ್ಕಾಗಿ ಬಂದಿರುವುದಾಗಿ ವಿದ್ಯಾರ್ಥಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ರಾಯಚೂರಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಈ ವಿದ್ಯಾರ್ಥಿನಿಯರು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದರು. ಮನೆಯವರಿಗೆ ಸುಳಿವು ನೀಡದೆ ಇದ್ದಕ್ಕಿದ್ದಂತೆ ಹೋಗಿದ್ದರಿಂದ ಆತಂಕಕ್ಕೊಳಗಾಗಿದ್ದ ಪಾಲಕರು ಪೊಲೀಸ್ ಠಾಣೆಯಲ್ಲಿ ಅಪಹರಣವಾಗಿದ್ದು, ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ತಂಡ ರಚಿಸಿಕೊಂಡು ತನಿಖೆ ಆರಂಭಿಸಿದ್ದರು.