ವಿಜಯಪುರ: ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಬುರ್ಖಾಧಾರಿ ವ್ಯಕ್ತಿಯೊಬ್ಬ ಸಂಚರಿಸಿ ಭಾರಿ ಆತಂಕ ಸೃಷ್ಟಿಯಾಗಿತ್ತು.
ಆಲಮಟ್ಟಿ ಜಲಾಶಯದ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದ ಈ ವ್ಯಕ್ತಿ ಬುರ್ಖಾ ಧರಿಸಿದ್ದ ಕಾರಣ ಮೊದಲು ಮಹಿಳೆ ಎಂದು ಅಂದುಕೊಳ್ಳಲಾಗಿತ್ತು.
ಕೆಲ ಸಮಯದ ಬಳಿಕ ಆ ಬುರ್ಖಾಧಾರಿ, ಪಕ್ಕದಲ್ಲಿರುವ ಮುಳ್ಳು ಕಂಟಿಗಳ ಕಡೆಗೆ ಹೋಗಿ ವಾಪಸ್ ಬರುವಾಗ ಬುರ್ಖಾ ತೆಗೆದು ಆಚೆ ಬಂದಿದ್ದನ್ನು ಗಮನಿಸಿದ ಪೊಲೀಸರು ಬುರ್ಖಾ ಧರಿಸಿದ್ದು ಮಹಿಳೆ ಅಲ್ಲ. ಪುರುಷ ಎಂಬುದು ತಿಳಿಯಿತು. ಈ ನಡವಳಿಕೆ ಕುರಿತು ಸಾಕಷ್ಟು ಅನುಮಾನ ಹಾಗೂ ಆತಂಕ ಸೃಷ್ಟಿಯಾಗಿತ್ತು. ನಂತರ ವಿಚಾರಣೆ ಬಳಿಕ ಮಂಗಳಮುಖಿ ಎಂದು ತಿಳಿದುಬಂತು.
ವಿಚಾರಣೆ ವೇಳೆ ತನ್ನೂರು ಮಂಗಳೂರು ಎಂದಿದ್ದ ಈಕೆ, ಮತ್ತೊಮ್ಮೆ ಹಾಸನ ಜಿಲ್ಲೆ ಸಕಲೇಶಪುರ ಅಂತಲೂ ಹೇಳಿದ್ದಾಳೆ. ಮನೆಯಲ್ಲಿ ಮದುವೆ ಮಾಡುತ್ತಿರುವ ಕಾರಣ ಜಗಳ ಮಾಡಿಕೊಂಡು ಬಂದಿದ್ದಾಗಿ ಹೇಳಿದ್ದಳು. ಆದರೆ ಈಗ ಇನ್ನೂ ಹೊಸದೊಂದು ಕಥೆ ಹೇಳಿದ್ದು, ಈ ಕುರಿತು ಎಸ್.ಪಿ ಆನಂದಕುಮಾರ ಮಾಹಿತಿ ನೀಡಿದ್ದಾರೆ.
ಈ ಮಂಗಳಮುಖಿಯ ಹೆಸರು ಕಿಶೋರ ಎಂದು ತಿಳಿದಿದೆ. ಬೆಂಗಳೂರಿನಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ. ಹೀಗಾಗಿ ಯಾರೂ ಆಘಾತಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಎಸ್.ಪಿ ಆನಂದಕುಮಾರ ಹೇಳಿದರು.
ತನಗೆ ಹೆಣ್ಣುಮಕ್ಕಳಿಗೆ ಹಾಕುವ ವೇಷಭೂಷಣ ಹಾಕಿಕೊಂಡರೆ ಖುಷಿಯಾಗುತ್ತದೆ, ಅದಕ್ಕಾಗಿ ಬುರ್ಖಾ ಧರಿಸಿದೆ ಎಂದಿದ್ದಾರೆ. ಮನೆಯವರಿಂದ ಕದ್ದು ಮುಚ್ಚಿ ಹೀಗೆ ವೇಷ ಧರಿಸಿ ಓಡಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಸದ್ಯಕ್ಕೆ ದೊರಕಿರುವ ಮಾಹಿತಿ ಪ್ರಕಾರ ಯಾವುದೇ ಅಂತಿಂಥ ವಿಷಯ ಇಲ್ಲ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಸದ್ಯ ಆಲಮಟ್ಟಿ ಜಲಾಶಯದ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಕಡೆಯಿಂದಲೂ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಲಾಶಯದ ಭದ್ರತೆಗೆ ಸರ್ವಸನ್ನದ್ದವಾಗಿದೆ ಎಂದರು.
ನಾಳೆ ಆಲಮಟ್ಟಿಯಲ್ಲಿಯೇ ಸಭೆ ಇದೆ. ಅಲ್ಲಿಯೇ ವಿವರಣೆ ಪಡೆಯಲಾಗುವುದು ಎಂದು ಸಚಿವ ಉಮೇಶ ಕತ್ತಿ ಹೇಳಿದರು.