ಉಡುಪಿ: ಕಾಂಗ್ರೆಸ್ನವರು ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದವರು, ನಮ್ಮದು ಘರ್ಜನಾ ರೂಪದಲ್ಲಿ ಇರಬೇಕಾಗಿರೊ ಸಿಂಹ. ಕಾಂಗ್ರೆಸ್ ನೋಡುವ ದೃಷ್ಟಿಯೇ ಬೇರೆ, ನಾವು ನೋಡುವ ದೃಷ್ಟಿಯೇ ಬೇರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೊಸ ಸಂಸತ್ ಭವನದ ಮೇಲೆ ಸ್ಥಾಪಿಸಿರುವ ರಾಷ್ಟ್ರ ಲಾಂಛನವನ್ನು ಸರ್ಕಾರ ಮಾರ್ಪಾಡು ಮಾಡಿದೆ. ಆ ಮೂಲಕ ರಾಷ್ಟ್ರ ಲಾಂಛನದ ಘನತೆಗೆ ಸರ್ಕಾರ ಅವಮಾನ ಮಾಡಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಮೂಲ ರಾಷ್ಟ್ರ ಲಾಂಛನದಲ್ಲಿರುವಂತೆ ಈ ಪ್ರತಿಮೆಯಲ್ಲಿ ಸಿಂಹಗಳ ಚಿತ್ರಣ ಇಲ್ಲ. ಹೊಸ ಸಂಸತ್ ಭವನದ ಮೇಲೊಇನ ಲಾಂಛನದಲ್ಲಿ ಸಿಂಹಗಳು ಬಾಯ್ತೆರೆದು ಗರ್ಜಿಸುತ್ತಿವೆ. ನರಭಕ್ಷಣೆಯ ಉತ್ಸಾಹದಲ್ಲಿರುವಂತೆ ಕಾಣುತ್ತಿದೆ ಎಂದು ಟೀಕಿಸಿವೆ. ಈ ಕುರಿತು ಉಡುಪಿಯಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದವರು, ನಮ್ಮದು ಘರ್ಜನಾ ರೂಪದಲ್ಲಿರಬೇಕಾಗಿರೊ ಸಿಂಹ ಎಂದು ಟಾಂಗ್ ಕೊಟ್ಟರು.
ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನ ಅನುಕರಿಸಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ಕಾಂಗ್ರೆಸ್ ನೋಡುವ ದೃಷ್ಟಿಯೇ ಬೇರೆ. ನಾವು ನೋಡುವ ದೃಷ್ಟಿಯೇ ಬೇರೆ. ನಮ್ಮಲ್ಲಿ ಕ್ರಿಯಾಶೀಲವಾದ ಆಯಕ್ಟೀವ್ ಪ್ರಧಾನಿ ಇದ್ದಾರೆ ಎಂದು ಕಾಂಗ್ರೆಸ್ಗೆ ಸಿಎಂ ತಿರುಗೇಟು ನೀಡಿದರು.