ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮದ ಬಾಯವ್ವ ವಸಂತ ಮಾಸ್ತೆ ಅವರಿಗೆ ಕೊನೆಗೂ ಅಡುಗೆ ಅನಿಲ ಸಿಲಿಂಡರ್ ಹಾಗೂ ಒಲೆ ದೊರೆಯಿತು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬುಧವಾರ ಅಜ್ಜಿ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ, ಆಹಾರ ನಿರೀಕ್ಷಕ ಜೆ.ಬಿ.ಬಾಗೋಜಿಕೊಪ್ಪ, ತಹಶೀಲ್ದಾರ್ ಆರ್.ಕೆ.ಕುಲಕರ್ಣಿ ಗುರುವಾರ ಅವರ ಮನೆಗೆ ಹೋಗಿ, ಅಡುಗೆ ಅನಿಲ ಸಿಲಿಂಡರ್, ಒಲೆಯ ಸೌಕರ್ಯ ಕಲ್ಪಿಸಿದರು.
ಬಾಯವ್ವ ವಸಂತ ಮಾಸ್ತೆ
ಬೆಳಗಾವಿಗೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ ಪ್ರಕಾಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಪರಿಶಿಷ್ಟ ಜಾತಿಯ ಬಾಯವ್ವ ಅವರ ಮನೆಯಲ್ಲಿ ಊಟ ಮಾಡಿದ್ದರು. 87 ವರ್ಷದ ಬಾಯವ್ವ ಅವರಿಗೆ ಈವರೆಗೂ ಸಿಲಿಂಡರ್ ನೀಡಿರಲಿಲ್ಲ. ಅನಿವಾರ್ಯವಾಗಿ ಅವರು ಕಟ್ಟಿಗೆ ಉರಿಸಿ ಅಡುಗೆ ಮಾಡಿ ಸಚಿವರಿಗೆ ಬಡಿಸಿದ್ದರು.