ಕೊಪ್ಪಳ: ಪ್ರಜಾಪ್ರಭುತ್ವಕ್ಕೆ ಆಪರೇಷನ್ ಕಮಲ ಮಾರಕ ಎನ್ನುವುದು ಗೊತ್ತಿದ್ದರೂ ಬಿಜೆಪಿ ಪಾಪದ ಹಣದಿಂದ ಈ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಸಿಂಧನೂರಿಗೆ ತೆರಳುವ ಮುನ್ನ ಇಲ್ಲಿಗೆ ಸಮೀಪದ ಬಸಾಪುರ ಬಳಿ ಇರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಬಿಜೆಪಿ ಈಗ ಮಾಡುತ್ತಿರುವುದು ಎನು?
ಎಂದು ಪ್ರಶ್ನಿಸಿದರು.
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಹಾಗಾದರೆ ಇವರು ಈಗ ಮಾಡುತ್ತಿರುವುದು ಎನು? ಮಧ್ಯ ಪ್ರದೇಶ ಸರ್ಕಾರ ಕಿತ್ತು ಹಾಕಿದವರು ಯಾರು? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ತೆಗೆದು ಹಾಕಿದವರು ಯಾರು? ಆಪರೇಷನ್ ಕಮಲ ಶುರು ಮಾಡಿದ್ದು ಯಾರು? ಎಂದು ಪ್ರಶ್ನೆಗಳ ಮಳೆ ಸುರಿಸಿದರು.
ಆಪರೇಷನ್ ಕಮಲಕ್ಕೆ ಬಿಜೆಪಿ ಪಾಪದ ಹಣ ಖರ್ಚು ಮಾಡುತ್ತಿದೆ. ಇದೆಲ್ಲ ಲೂಟಿ ಮಾಡಿದ ಹಣ. ಒಬ್ಬ ಶಾಸಕನಿಗೆ
₹25 ರಿಂದ ₹30 ಕೋಟಿ ಹಣ ಕೊಡುತ್ತಾರೆ. ಇದಕ್ಕೆಲ್ಲ ಎಲ್ಲಿಂದ ಹಣ ಬರುತ್ತದೆ. ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ಇದೆ ಎಂದು ವಾಗ್ದಾಳಿ ನಡೆಸಿದರು.