ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಉಮೇಶ ಕತ್ತಿಗೆ ತಿರುಗೇಟು ನೀಡಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಏಕೀಕರಣ ನಡೆದ ಹೋರಾಟವನ್ನು ಉಮೇಶ ಕತ್ತಿ ನೆನಪಿಸಿಕೊಳ್ಳಲ್ಲಿ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು. ಬಿಜೆಪಿಯವರು ಯಾರು ಖಂಡಿಸುತ್ತಾರೋ ಇಲ್ವೋ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ ಎಂದರು.
ಏಕೀಕರಣ ಹೋರಾಟ ಉದ್ದೇಶ ಸಹಬಾಳ್ವೆ.
ಏಕೀಕರಣ ಉದ್ದೇಶ ಮರೆತು ಮಾತನಾಡುವುದು ಸರಿಯಲ್ಲ. ಉಮೇಶ್ ಕತ್ತಿ 2009 ರಲ್ಲಿ ಹೀಗೆಯೇ ಹೇಳಿದ್ದ, ಆಗ ಮುಖ್ಯಮಂತ್ರಿ ತಾನೇ ಆಗುವೆ ಅಂತ ಹೇಳಿದ್ದ. ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಕೇಳೋಣ. ಅನ್ಯಾಯ ಸರಿಪಡಿಸಲು ಕೇಳೋಣ. ಅದು ಬಿಟ್ಟು ಈ ರಾಜ್ಯ ವಿಭಜನೆ ಹೇಳಿಕೆ ಸರಿಯಲ್ಲ ಎಂದು ಹರಿಹಾಯ್ದರು.