ಬೆಳಗಾವಿ: ‘ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಬಗ್ಗೆ ಸಚಿವ ಉಮೇಶ ಕತ್ತಿ ನೀಡಿದ ಹೇಳಿಕೆಗೆ, ಇಲ್ಲಿ ಸುದ್ದಿಗಾರರಿಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ರಾಜ್ಯ 3 ಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿದ್ದರೆ ಮತ್ತೊಂದು ರಾಜ್ಯ ರಚಿಸಲು ವಿಶೇಷ ಮಸೂದೆ ಹೊರತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದು ಜಾರಿಯಾದರೆ ಎರಡು ರಾಜ್ಯಗಳಾಗುವುದು ಸಹಜ’ ಎಂದರು.
‘ಹೋರಾಟ ಮಾಡಿ ಅಲ್ಲಿನವರು ತೆಲಂಗಾಣ ರಾಜ್ಯ ರಚಿಸಿಕೊಂಡರು. ಆದರೆ, ಇದು ಹೋರಾಟವಲ್ಲ. ಪ್ರತ್ಯೇಕ ರಾಜ್ಯ ರಚನೆಗೆ ಬಿಜೆಪಿಯವರೇ ಮಸೂದೆ ಜಾರಿಗೊಳಿಸುತ್ತಿದ್ದಾರೆ. ಹಾಗಾಗಿ ಇಲ್ಲಿ ಪ್ರತ್ಯೇಕ ರಾಜ್ಯದ ಪ್ರಶ್ನೆಯೇ ಬರುವುದಿಲ್ಲ. ಆ ಮಸೂದೆ ಜಾರಿಗೆ ಬರುವಾಗ ಚರ್ಚಿಸೋಣ’ ಎಂದು ಉತ್ತರಿಸಿದರು.