ಉಡುಪಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಇಲಾಖೆಯ ಸಹಾಯಕ ಅಭಿಯಂತರ ಹರೀಶ್ ಅವರ ಕೊರಂಗ್ರಪಾಡಿಯ ಬೈಲೂರು ನಿವಾಸಕ್ಕೆ ಶುಕ್ರವಾರ ಮುಂಜಾನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.
1.5 ಕೆಜಿ ಚಿನ್ನ, ಮುಕ್ಕಾಲು ಕೆಜಿ ಬೆಳ್ಳಿ, ಇನ್ನೋವಾ ಕಾರು, ಮಾರುತಿ ಆಲ್ಟೋ 800, 2 ದ್ವಿಚಕ್ರವಾಹನಗಳು ಪತ್ತೆಯಾಗಿವೆ. 4.30 ಲ.ರೂ.ನಗದು ಹಾಗೂ ಅಪಾರ ಪ್ರಮಾಣದ ದಾಖಲೆ ಪತ್ರಗಳು ಮನೆಯಲ್ಲಿ ದೊರೆತಿವೆ. ಇವಿಷ್ಟೇ ಅಲ್ಲದೆ ಹಾವಂಜೆ ಹಾಗೂ ಪೆರ್ಡೂರಿನಲ್ಲಿ ಪತ್ನಿಯ ಹೆಸರಿನಲ್ಲಿ 5 ಸರ್ವೆ ಸಂಖ್ಯೆೆಯಲ್ಲಿ 2 ನಿವೇಶನಗಳು ಪತ್ತೆಯಾಗಿವೆ. ಬ್ಯಾಂಕ್ ನಲ್ಲಿಯೂ ಎಫ್ಡಿ ಖಾತೆ ಹೊಂದಿದ್ದು, ಬ್ಯಾಂಕ್ ನಲ್ಲಿರುವ ನಗದುಗಳ ಬಗ್ಗೆಯೂ ಮಾಹಿತಿ ಸಂಗ್ರಹ ನಡೆಯುತ್ತಿದೆ. ಕೊರಂಗ್ರಪಾಡಿಯ ಮನೆಯಲ್ಲಿ ಎಸಿಬಿ ಕಾರ್ಯಾಚರಣೆ ಮುಂದುವರಿದಿದೆ.