ಬೆಳಗಾವಿ: ‘ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ₹ 155 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಲೆಕ್ಕ ಹಾಕಿ ನೋಡಿದರೆ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೆ ₹ 1.75 ಲಕ್ಷ ಸಾಲ ಹೇರಿದ್ದಾರೆ. ಇಂಥವರಿಂದ ದೇಶ ಉಳಿಯುತ್ತದೆಯೇ’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ದೇಶದ ಸಾಲ ₹ 53.11 ಲಕ್ಷ ಕೋಟಿ ಮಾತ್ರ ಇತ್ತು. ಆದರೆ, ಬಿಜೆಪಿ ಸರ್ಕಾರ ಬಂದ ಎಂಟೇ ವರ್ಷಗಳಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಈ ಸಾಲವನ್ನು ಮೋದಿ ತೀರಿಸುತ್ತಾರಾ? ದೇಶದ ಜನರೇ ಈ ಭಾರ ಹೊತ್ತುಕೊಳ್ಳಬೇಕಾಗಿದೆ’ ಎಂದರು.
‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಿಂದ ಒಟ್ಟು ₹ 19 ಲಕ್ಷ ಕೋಟಿ ತೆರಿಗೆ ಸಂದಾಯ ಮಾಡಲಾಗಿದೆ. ಆದರೆ, ರಾಜ್ಯಕ್ಕೆ ಮರಳಿ ಸಿಕ್ಕ ತೆರಿಗೆ ಪಾಲು ಕೇವಲ ₹ 1.29 ಲಕ್ಷ ಕೋಟಿ. ಇನ್ನೂ ₹ 18.71 ಲಕ್ಷ ಕೋಟಿಯನ್ನು ಕೇಂದ್ರವೇ ಇಟ್ಟುಕೊಂಡಿದೆ. ಇದೆಲ್ಲ ಯಾರು ದುಡ್ಡು? ರಾಜ್ಯದ ಜನ ದುಡಿದು ಕೊಟ್ಟ ದುಡ್ಡು. ಇಂಥವರಿಗೆ ಮತ್ತೆ ಮತ ಕೊಡಬೇಕೆ’ ಎಂದು ಅವರು ಪ್ರಶ್ನೆ ಮಾಡಿದರು.
‘2014ರಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರಲ್ಗೆ 118 ಡಾಲರ್ ಇತ್ತು. ಈಗ 113 ಡಾಲರ್ಗೆ ಇಳಿದಿದೆ. ಆದರೆ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಾತ್ರ ಗಗನಕ್ಕೇರುತ್ತಿದೆ. ಕಾರಣ ಕೇಳಿದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ದುಬಾರಿಯಾಗಿದೆ ಎಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಾರೆ’ ಎಂದೂ ಸಿದ್ದರಾಮಯ್ಯ ಕಿಡಿ ಮಾಡಿದರು.