ಬೆಂಗಳೂರು: ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡು ಹೊಸಮುಖಗಳಿಗೆ ಮನ್ನಣೆ ನೀಡಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೆ.ಸಿ.
ರಾಮಮೂರ್ತಿ ಅವರು ಮತ್ತೊಂದು ಅವಧಿಗೆ ಆಯ್ಕೆ ಆಗಲು ಟಿಕೆಟ್ ಬಯಸಿದ್ದರು. ಆದರೆ ರಾಜ್ಯದಿಂದ ಅವರನ್ನು ಆಯ್ಕೆ ಮಾಡುತ್ತಿಲ್ಲ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾಗಿ ಉನ್ನತ ಮೂಲಗಳು ಖಚಿತಪಡಿಸಿವೆ. ನಿರ್ಮಲಾ ಸೀತಾರಾಮನ್ ಅವರನ್ನು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಲಾಗುತ್ತದೆ ಎಂದು ಹೇಳಲಾಗಿದೆ.
ಯಾರಿಗೆ ಅವಕಾಶ?: ಪಕ್ಷದ ಉಪಾಧ್ಯಕ್ಷರಾದ ನಿರ್ಮಲ ಕುಮಾರ್ ಸುರಾನ ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಅವರಿಗೆ ರಾಜ್ಯಸಭೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸುರಾನ ಅವರು ಒಂದು ಅವಧಿಗೆ ಶಾಸಕರಾಗಿದ್ದರು. ಆ ನಂತರ ಪ್ರತಿ ಚುನಾವಣೆಯಲ್ಲಿ ಅವರ ಹೆಸರು ಶಿಫಾರಸು ಆಗುತ್ತಿತ್ತು. ಆದರೆ ಹೈಕಮಾಂಡ್ ಪರಿಗಣಿಸಿರಲಿಲ್ಲ. ಆದರೆ ಈ ಬಾರಿ ಪರಿಗಣಿಸಲಿದೆ ಎಂದು ಮೂಲಗಳು ಹೇಳಿವೆ.
ಬಿಬಿಎಂಪಿ ಸದಸ್ಯರಾಗಿದ್ದ ಗೀತಾ ವಿವೇಕಾನಂದ ಅವರು ಇತ್ತೀಚೆಗೆ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ನೇಮಕವಾಗಿದ್ದರು. ಸುರಾನ ಹಾಗೂ ಗೀತಾ ಅವರಿಬ್ಬರು ಸಹ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಆಪ್ತರಾಗಿದ್ದಾರೆ.
ಅಚ್ಚರಿಯ ಆಯ್ಕೆ: ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ಇನ್ನೂ ಚರ್ಚೆ ನಡೆಸಿಲ್ಲ. ರಾಜ್ಯ ಕೋರ್ ಕಮಿಟಿಯಿಂದ 30ಕ್ಕೂ ಹೆಚ್ಚು ಹೆಸರು ಶಿಫಾರಸು ಆಗಿವೆ. ಸಂಘ ಪರಿವಾರದಿಂದಲೂ ಒಂದು ಪಟ್ಟಿ ಹೈಕಮಾಂಡ್ಗೆ ರವಾನೆಯಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಅಚ್ಚರಿಯ ಆಯ್ಕೆ ಹೊರಬೀಳುವ ಸಾಧ್ಯತೆ ಇದೆ.