ಬೆಳಗಾವಿ): ‘ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ, ಸರದಾರ ನನ್ನೆತ್ತು, ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗ್ಯಾವೊ…’ ಎಂದು ರೈತರು ಭೂಮಿಯಲ್ಲಿ ದುಡಿಯುವ ಎತ್ತುಗಳ ಬಗ್ಗೆ ವ್ಯಕ್ತಪಡಿಸುವ ಅಭಿಮಾನ-ಪ್ರೀತಿಗೆ ಪಾರವೇ ಇಲ್ಲ.
ಅದರ ಮುಂದುವರಿದ ಭಾಗವಾಗಿ ಇಲ್ಲಿ ಶರ್ಯತ್ತುಗಳನ್ನು ನಡೆಸುವುದು ಇಲ್ಲಿನ ಟ್ರೆಂಡ್ ಆಗಿದೆ.
ಶಿವಬೋಧರಂಗ ಜಾತ್ರೆಯಲ್ಲಿ ನಡೆಯುವ ಎತ್ತುಗಳ ಸ್ಪರ್ಧೆಯೂ ಗಮನಸೆಳೆಯುತ್ತದೆ. ಕಟ್ಟುಮಸ್ತಾದ ಎತ್ತುಗಳ ಠಾವು, ಎತ್ತುಗಳ ಮುಗದಾನು ಹಿಡಿದು ಹೆಜ್ಜೆ ಹಾಕುವ ಕುಸ್ತಿ ಪೈಲ್ವಾನರಂತಹ ರೈತರ ನಡಿಗೆಯು ರೋಮಾಂಚನಗೊಳಿಸುತ್ತದೆ.
ಆಕರ್ಷಣೆಗಳಲ್ಲಿ ಒಂದು:
ಈ ಬಾರಿ ಜಾತ್ರೆ ಅಂಗವಾಗಿ ಜೋಡೆತ್ತುಗಳ ತೆರೆ ಬಂಡಿ ಸ್ಪರ್ಧೆಗೆ 10 ಎಕರೆ ವಿಸ್ತಾರದ ಎಸ್ಎಸ್ಆರ್ ಮೈದಾನದ ತುಂಬೆಲ್ಲಾ ಎತ್ತುಗಳ ಕಲರವ ತುಂಬಿತ್ತು. ಜಿಲ್ಲೆಯೊಂದಿಗೆ ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಿಂದ ಎತ್ತುಗಳು ಜಮಾಯಿಸಿದ್ದವು. ಮಠದ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರ ಪ್ರೇರಣೆಯಿಂದ ಶರ್ಯತ್ತು ಇಲ್ಲಿನ ಆಕರ್ಷಣೆಗಳಲ್ಲಿ ಒಂದಾಗಿದೆ. ದನದ ಪೇಟೆಯ ವ್ಯಾಪಾರಿಗಳು ಎತ್ತುಗಳ ಶರ್ಯತ್ತು ಸಂಘಟನೆಯ ರೂವಾರಿಗಳು. 4 ದಶಕಗಳಿಂದ ನಡೆಸಿಕೊಂಡು ಬಂದಿದ್ದಾರೆ.
24 ಜೋಡೆತ್ತುಗಳ ಪೈಪೋಟಿ
ಈ ಬಾರಿ 24 ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮೆಟಗುಡ್ಡದ ಕಾಶಿಲಿಂಗೇಶ್ವರ ಪ್ರಸನ್ನ ಎತ್ತುಗಳು 874 ಅಡಿ ಎಳೆದು ಪ್ರಥಮ ಸ್ಥಾನ ಪಡೆದು ₹30ಸಾವಿರ ಬಹುಮಾನಕ್ಕೆ ಭಾಜವಾದವು. 870 ಅಡಿ ಎಳೆದ ಕಮಲದಿನ್ನಿ ಮಾರುತೇಶ್ವರ ಪ್ರಸನ್ನ 2ನೇ ಸ್ಥಾನ, 804 ಅಡಿ ಎಳೆದ ಅಕ್ಕಿಮರಡಿ ಕರಿಸಿದ್ಧೇಶ್ವರ ಎತ್ತುಗಳು 3ನೇ ಸ್ಥಾನ, 798 ಅಡಿ ಎಳೆದ ಯಾದವಾಡ ಕಾರ್ತಿಕ ಮಿರ್ಜಿ ಎತ್ತು 4ನೇ ಸ್ಥಾನ, 797 ಅಡಿ ಎಳೆದ ಇಟ್ನಾಳದ ಕಾಶಿಲಿಂಗೇಶ್ವರ ಎತ್ತುಗಳು 5ನೇ ಸ್ಥಾನ ಪಡೆದು ಕ್ರಮವಾಗಿ ₹25ಸಾವಿರ, ₹20ಸಾವಿರ, ₹15ಸಾವಿರ, ₹10ಸಾವಿರ ಬಹುಮಾನ ಗೆದ್ದವು