ಬೆಂಗಳೂರು: ಪಾದಾಚಾರಿ ( pedestrian ) ಗಳ ಮೇಲೆ ಕಾರು ಹರಿದು ಹೋಗಿ ಓರ್ವ ದುರ್ಮರಣ ಹೊಂದಿದ ಘಟನೆ ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದು ಹೋಗಿದ್ದಲ್ಲದೆ, ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಪಘಾತ (Accident)ದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ (28) ಎಂಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಚಿನ್, ಶಿವರಾಜು, ಶೈಲೇಂದ್ರ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.
ಗಾಯಾಳುಗಳಾದ ಶಿವರಾಜ್ ಮತ್ತು ಸಚಿನ್ ಮೃತ ಸುರೇಶ್ನ ಸ್ನೇಹಿತರಾಗಿದ್ದು, ಮೂಲತಃ ಹೊಸನಗರ ತಾಲೂಕಿನವರಾಗಿದ್ದಾರೆ. ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಅದರಂತೆ ಸುರೇಶ್, ಶಿವರಾಜ್, ಸಚಿನ್ ಕೆಲಸಕ್ಕೆ ಹೋಗಲೆಂದು ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮತ್ತೋರ್ವ ಯುವಕ ಶೈಲೇಂದ್ರ, ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಯಾಗಿದ್ದು, ವಾಕಿಂಗ್ ಮಾಡಲು ಮನೆಯಿಂದ ಹೊರಬಂದಿದ್ದನು.
ಕಾರು ಚಾಲಕನ ನಿಯಂತ್ರಣ ತಪ್ಪಿ ಉದ್ಭವ್ ಆಸ್ಪತ್ರೆಯ ಎದುರು ಈ ದುರ್ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಬನಶಂಕರಿ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಘಟನೆ ಸಂಬಂಧ ಕಾರು ಸಹಿತ ಕಾರು ಚಾಲಕ ಮುಖೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆ 7.20ಗಂಟೆ ಸಮಯದಲ್ಲಿ ನಂಬರ್ KA-51-MK5416 ನಂಬರ್ನ ಕಾರನ್ನು ಕತ್ತರಗುಪ್ಪೆ ಜಂಕ್ಷನ್ ಕಡೆಯಿಂದ ಇಟ್ಟಮಡು ಜಂಕ್ಷನ್ ಕಡೆ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬರಲಾಗಿದೆ. ಉದ್ಭವ ಆಸ್ಪತ್ರೆ ಬಳಿ ಇರುವ ಚಂದನ್ ಮೋಟಾರ್ ದ್ವಿಚಕ್ರ ವಾಹನ ಶೋರೂಂ ಬಳಿ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದುಹೋಗಿದೆ. ಘಟನೆಯಲ್ಲಿ ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.