ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಮಾಜಿ ಸಂಸದೆ ರಮ್ಯಾ ತಿರುಗಿಬಿದ್ದಿರುವ ಸಂಬಂಧ ರಾಜ್ಯ ಬಿಜೆಪಿ ಟೀಕಿಸಿದೆ. ಈ ಕುರಿತು ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ?
ಸಾರ್ವಜನಿಕ ಬದುಕಿನಿಂದ ಕಳೆದು ಹೋದವರೆಲ್ಲ ಈಗ ಬಂದು ಕೆಪಿಸಿಸಿ ಅಧ್ಯಕ್ಷರಿಗೆ ಪಾಠ ಹೇಳುತ್ತಿರುವುದನ್ನು ನೋಡಿದರೆ, ಕನಕಪುರದ ಬಂಡೆ ಎಷ್ಟು ಗಟ್ಟಿ ಎಂದು ಯೋಚಿಸಬೇಕಲ್ಲವೇ? ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ ಮೀರ್ ಸಾದಿಕ್ ತಂತ್ರವಿದೆಯೇ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಅಪಹಾಸ್ಯ ಮಾಡಿದ್ದಾರೆ. “ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ”, ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಸ್ಥಿತಿ.
ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ. ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು ಮೀರ್ ಸಾದಿಕ್ ಅವರಿರಬಹುದೇ? ಎಂದು ಡಿಕೆಶಿ ಅವರನ್ನು ಅಸಹಾಯಕ ಡಿಕೆಶಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.