ರಾಮನಗರ: ಅವರವರ ಕರ್ಮಕ್ಕೆ ತಕ್ಕ ಪ್ರತಿಫಲವನ್ನ ಅವರೇ ಅನುಭವಿಸಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು, ಇನ್ನು ಕೆಲವರಿಗೆ ತಕ್ಷಣವೇ ಕರ್ಮಫಲ ದೊರೆಯುತ್ತದೆ ಎಂಬ ಮಾತು ಅಕ್ಷರಶಃ ಈ ಪ್ರಕರಣಕ್ಕೆ ಸಾಕ್ಷಿ. ಮಹಿಳೆಯೊಬ್ಬರನ್ನ ಕೊಲೆ ಮಾಡಿ ಶವವನ್ನು ತಡರಾತ್ರಿ ಬೈಕ್ನಲ್ಲಿ ಶವ ಸಾಗಿಸುತ್ತಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿ ಎದುರೇ ಆ ಬೈಕ್ ಅಪಘಾತಕ್ಕೀಡಾಗಿದ್ದು, ಕೊಲೆ ರಹಸ್ಯ ಬಯಲಾಗಿದೆ!
ಇಂತಹ ಭಯಾನಕ ಘಟನೆ ರಾಮನಗರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಶ್ವೇತಾ ಕೊಲೆಯಾದಾಕೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಶ್ವೇತಾಳ ಶವವನ್ನ ಬೈಕ್ನಲ್ಲಿ ಇಟ್ಟುಕೊಂಡು ಪುರುಷರಿಬ್ಬರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಾ ಬೇರೆಡೆಗೆ ಸಾಗಿಸುತ್ತಿದ್ದರು. ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೈಕ್ ಸ್ಕಿಡ್ ಆಗಿದ್ದು, ಅಪಘಾತ ಸಂಭವಿಸಿದೆ.
ಅಪಘಾತ ಸ್ಥಳಕ್ಕೆ ಬಂದ ನಗರ ಪೊಲೀಸರು ಬಂದಾಗ ಮಹಿಳೆ ಮೃತಪಟ್ಟಿರುವುದು ಗೊತ್ತಾಗಿದೆ. ಮೇಲ್ನೋಟಕ್ಕೆ ಅಪಘಾತದಕ್ಕೆ ಆಕೆ ಮೃತಪಟ್ಟಂತೆ ಕಂಡಿದೆ. ಮಹಿಳೆಯ ಶವವನ್ನ ತಪಾಸಣೆ ಮಾಡಿದ ಜಿಲ್ಲಾ ಆಸ್ಪತ್ರೆ ವೈದ್ಯರು, ಮಹಿಳೆ ಮೃತಪಟ್ಟು ಹಲವು ಗಂಟೆ ಕಳೆದಿದೆ ಎಂದಿದ್ದಾರೆ. ಅನುಮಾನಗೊಂಡ ಪೊಲೀಸರು, ಬೈಕ್ ಸವಾರರಾದ ನಾಗರಾಜು ಮತ್ತು ವಿನೋದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.