ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಸಚಿವ ಪ್ರಭು ಚೌಹಾಣ್ ಹಾಗೂ ಪರಿಷತ್ ಸದಸ್ಯ ಸಂಕನೂರು ಪತ್ರಗಳನ್ನು ತನಿಖಾಧಿಕಾರಿಗಳು ಹೇಗೆ ಆಧಾರ ರಹಿತವಾಗಿದೆ ಎಂದು ತೀರ್ಮಾನಿಸಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗಾದರೆ ಸಂಪುಟ ಸಚಿವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಯಾವುದೇ ಬೆಲೆ ಇಲ್ಲವೇ? ಈ ದಾಖಲೆಗಳು ಪ್ರಕರಣಕ್ಕೆ ಸಂಬಂಧಿಸುವುದಿಲ್ಲವೇ? ಬಿಜೆಪಿ ಶಾಸಕರು ಹಾಗೂ ಸಚಿವರಿಗೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು.
ನನಗೆ ನೀಡಿರುವ ಪೊಲೀಸರ ನೋಟಿಸ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ವಿಚಾರ ಹರಿದಾಡುತ್ತಿದ್ದು ಅವುಗಳನ್ನು ಸಾಕ್ಷಿಯನ್ನಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದೆ. ಲಭ್ಯವಾಗುವ ಸಾಕ್ಷಿಗಳ ನಕಲಿ ಅಸಲಿ ಕಂಡು ಹಿಡಿಯುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಎಂದರು.