ಕೊಪ್ಪಳ: ಸಾವು ಯಾವಾಗ? ಹೇಗೆ ಬರುತ್ತೆ? ಎಂದು ಊಹಿಸಲೂ ಸಾಧ್ಯವಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಇಂದು(ಶುಕ್ರವಾರ) ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳು ದುರಂತ ಅಂತ್ಯಕಂಡಿದ್ದು. ಈ ದೃಶ್ಯ ನೋಡಿದ್ರೆ ಕರುಳು ಚುರ್ ಅನ್ನುತ್ತೆ. ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ?
ಎಂದು ಮನದಲ್ಲೇ ಶಪಿಸುತ್ತೀರಿ. ಹೃದಯವಿದ್ರಾವಕ ಘಟನೆ ಕಂಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದ ಶೈಲಮ್ಮ(28) ಮತ್ತು ಇವರ ಮಕ್ಕಳಾದ ಸಾನ್ವಿ(4), ಪವನ್ (2) ಮೃತ ದುರ್ದೈವಿಗಳು. ಶುಕ್ರವಾರ ಬೆಳಗ್ಗೆ ಶೈಲಮ್ಮ ಬಟ್ಟೆ ತೊಳೆಯುತ್ತಿದ್ದರೆ, ಅತ್ತ ಮಕ್ಕಳು ಪಕ್ಕದಲ್ಲೇ ಅಮ್ಮನ ಜೊತೆ ಮಾತಾಡುತ್ತಾ ಆಟವಾಡುತ್ತಿದ್ದರು. ಮನೆ ಮುಂದೆ ಬಟ್ಟೆ ಒಣ ಹಾಕಲೆಂದು ಹೋದಾಗ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಮನೆ ಆವರಣದಲ್ಲೇ ಮೂವರ ಮೃತದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.