ತುಮಕೂರು: ರಾಜಕಾರಣಿಗಳ ಜತೆ ಸೇರಿ ಮಠಾಧಿಪತಿಗಳು ಹಾಳಾಗುತ್ತಿದ್ದೇವೆ. ಮಠಾಧೀಶರು ಎಚ್ಚರದಿಂದ ದೇಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಧರ್ಮದಿಂದ ದೇಶ ಉಳಿಸುವ ಕೆಲಸ ಮಾಡಬೇಕು. ನಮಗೆ ರಾಜಕೀಯ ಬೇಡ ದೇಶ ಬೇಕಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ವಿಷಾದಿಸಿದರು.
ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಯೋಗಿಗಳ ಸಂಸ್ಮರಣೆ, ಗುರುಲಿಂಗ ಜಂಗಮರ ಪೂಜೆ, ಬಸವ ಜಯಂತಿ, ರಾಜ್ಯಮಟ್ಟದ ಭಜನಾ ಮೇಳ ಮತ್ತು ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಆರ್ಕೆಸ್ಟ್ರಾಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಮಠ ಹಾಳು ಮಾಡುತ್ತಿದ್ದಾರೆ. ಆದರೆ, ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹಿಂದೇಟು ಹಾಕಲಾಗುತ್ತಿದೆ. ಹಲವು ದಾನಿಗಳು ಸಮಾಜದ ಸತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ತಲೆ ಹೊಡೆಯವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶ ಆಳುವವರು ಬಡ ಜನತೆಯ ಹಿತವನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.