ಶಿವಮೊಗ್ಗ: ಕಾಂಗ್ರೆಸ್, ಜೆಡಿಎಸ್ ತೊರೆದ ಭದ್ರಾವತಿ ತಾಲ್ಲೂಕು ಮುಖಂಡರು ಶನಿವಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಭದ್ರಾವತಿ ತಾಲ್ಲೂಕಿನ ಪ್ರಭಾವಿ ಜೆಡಿಎಸ್ ಮುಖಂಡ ಎಸ್.ಕುಮಾರ್, ಪತ್ನಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಪ್ರದೀಪ್, ಕಾಂಗ್ರೆಸ್ ಮುಖಂಡ ಸತೀಶ್ ಗೌಡ ಹಾಗೂ ಅವರ ಪತ್ನಿ ಜಿಲ್ಲಾ ಪಂಚಾಯಿಯಿ ಮಾಜಿ ಸದಸ್ಯೆ ಉಷಾ ಸತೀಶ್ ಗೌಡ, ನಾರಾಯಣ ಗುರು ವಿಚಾರ ವೇದಿಕೆ ಮುಖಂಡ ನಟರಾಜ್ ಮತ್ತು ಬೆಂಬಲಿಗರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ‘ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಶಾಸಕರಿದ್ದಾರೆ. ಭದ್ರಾವತಿಯಲ್ಲಿ ಇಲ್ಲ ಎಂಬ ಕೊರಗು ಇತ್ತು, ಮುಂದಿನ ಚುನಾವಣೆಯಲ್ಲಿ ಆ ಕೊರತೆ ನೀಗಲಿದೆ’ ಎಂದರು.