ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾಟಾಚಾರದ ವೈಮಾನಿಕ ಸಮೀಕ್ಷೆ ನಡೆಸಿದ್ದು, ಸಂತ್ರಸ್ತರ ಸಮಸ್ಯೆ ಆಲಿಸಿದೆ ಹಾಗೇ ಬಂದು ಹೀಗೆ ಹೋಗಿದ್ದಾರೆ.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾನಕ್ಕೆ ಬೆಳಿಗ್ಗೆ 10.30ಕ್ಕೆ ಬಂದಿಳಿದ ಸಿಎಂ ಅವರು ಬೆಳಗಾವಿ, ಧಾರವಾಡ ಜನಪ್ರತಿನಿಧಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಿದರು. ಆದರೆ ಸುವರ್ಣಸೌಧದ ಮುಂದೆಯೇ ರೈತರು ಪ್ರತಿಭಟನೆ ನಡೆಸಿದರು ಸಹ ಮುಖ್ಯಮಂತ್ರಿಗಳು ಅವರತ್ತ ಸುಳಿಯಲಿಲ್ಲ.
ಸಭೆ ಬಳಿಕ ಮೂವರು ಸಚಿವ ಬಸವರಾಜ ಬೊಮ್ಮಾಯಿ, ಆರ್.ಅಶೋಕ, ರಮೇಶ ಜಾರಕಿಹೊಳಿ ಅವರೊಂದಿಗೆ ಸಿಎಂ ಹೆಲಿಕ್ಯಾಪ್ಟರ್ ಮೂಲಕ ಸಮೀಕ್ಷೆ ನಡೆಸಿದರು. ಬಹುಮುಖ್ಯವಾಗಿ ಅಥಣಿ ಮತಕ್ಷೇತ್ರದಲ್ಲಿಯೇ ಹಲವು ಗ್ರಾಮಗಳು ಈ ಬಾರಿ ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. ಆದರೆ ಈ ಭಾಗದ ಪ್ರಮುಖ ಪ್ರತಿನಿಧಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಮೀಕ್ಷೆ ಭಾಗಿಯಾಗದೆ ದೂರ ಉಳಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಖುದ್ದು ಜನರ ಸಮಸ್ಯೆ ಆಲಿಸಿ ರೈತರಿಗೆ, ಸಂತ್ರಸ್ತರ ಕಣ್ಣೀರು ಒರೆಸಬೇಕಾದ ನಾಡ ದೊರೆ ಹಾಗೇ ಬಂದು ಹೀಗೆ ಹೋದರು. ಜತೆಗೆ ಜನರ ಸಮಸ್ಯೆ ಬದಲು ಸರ್ಕಾರ ಆರ್ಥಿಕ ಸಂಕಷ್ಟ, ಆರ್ಥಿಕ ಪುನರ್ಚೇತನ ಬಗ್ಗೆ ಮಾತನಾಡಿ ಭರವಸೆ ಸುರಿಮಳೆಯನ್ನೇ ಸುರಿಸಿದ್ದಾರೆ.
ಪರಿಹಾರದ ನೀರಿಕ್ಷೆಯಲ್ಲಿದ್ದ ಅತೀವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ನಿರಾಸೆ ಮೂಡಿಸಿದೆ.
ಇನ್ನೊಂದಡೆ ವೈಮಾನಿಕ ಸಮೀಕ್ಷೆ ಬಂದ ಸಿಎಂ ಹೆಲಿಕ್ಯಾಪ್ಟರ್ ನಿಂದ ಕೆಳಗಿಳಿದು ಹಾನಿಗೀಡಾದ ಪ್ರದೇಶದ ಜನರ ಸಮಸ್ಯೆ ಆಲಿಸದೆ ಬಂದು ಹೋಗಿರುವುದಕ್ಕೆ ವಿರೋಧ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.