ವಿಜಯಪುರ: ಎಟಿಎಂ ಸೆಕ್ಯೂರಿಟಿ ಗಾರ್ಡ್ ನನ್ನು ಬರ್ಬರವಾಗಿ ಹತ್ಯೆಗೈದು ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.ಸಿಂದಗಿ ಪಟ್ಟಣದ ಶಾಪೂರ ಕಾಂಪ್ಲೆಕ್ಸ್ನಲ್ಲಿದ್ದ ಐಸಿಐಸಿಐ ಬ್ಯಾಂಕ್ನ ಎಟಿಎಂನಲ್ಲಿ ಈ ಘಟನೆ ನಡೆದಿದೆ. ರಾಹುಲ್ ರಾಠೋಡ್ (22) ಕೊಲೆಯಾದ ಯುವಕ. ಈತ ಜಿಲ್ಲೆಯ ಮದಬಾವಿ ತಾಂಡಾ ನಿವಾಸಿಯಾಗಿದ್ದು, ಐಸಿಐಸಿಐ ಬ್ಯಾಂಕ್ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.
ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದ ಮೂವರು ಸೋಮವಾರ ರಾತ್ರಿ ಸುತ್ತಿಗೆಯಿಂದ ರಾಹುಲ್ ರಾಠೋಡ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಆರೋಪಿಗಳು ರಾಹುಲ್ ರಾಠೋಡ್ ಹತ್ಯೆ ಮಾಡಿದ ನಂತರ ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಟಿಎಂನಲ್ಲಿದ್ದ ಹಣದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.
ಅಲ್ಲದೇ ಸ್ಥಳದಲ್ಲಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬಂದು ಪರಿಶೀಲನೆ ಮಾಡಲಾಗುತ್ತಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.