ಧಾರವಾಡ : ರಾಜಕೀಯ ಜ್ಯೋತಿಷಿ ನಾನಲ್ಲ. ಆದರೆ ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತದೆ. ಅದರನ್ವಯ ರಾಜ್ಯದಲ್ಲಿ 2023ಕ್ಕೆ ಬಿಜೆಪಿ ಹೊಸ ಶಕ್ತಿಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಪಂಚ ರಾಜ್ಯ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಆಗಬಹುದು. ಆದರೆ, ಒಟ್ಟಾರೆ ಒಳ್ಳೆಯ ದಿನಗಳು ಬರಲಿವೆ. 2023ರ ಚುನಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಏನೇ ನಿರ್ಣಯ ಕೈಗೊಂಡರೂ ಅದಕ್ಕೆ ನಾವು ಬದ್ಧ ಎಂದರು.
ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಮಯದಲ್ಲಿ ಅವರ ನೇತೃತ್ವದ ಸರಕಾರದಲ್ಲಿ ಮಂತ್ರಿ ಆಗಿದ್ದೆ. ನನ್ನಷ್ಟು ಯೋಗ್ಯತೆ ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ? ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಕ್ಕಾಗಿ ವಾಜಪೇಯಿ ನನಗೆ ಪತ್ರ ಕೊಟ್ಟಿದ್ದಾರೆ. ಅಟಲಜೀ ಹಸ್ತಾಕ್ಷರದಿಂದ ಪತ್ರ ಪಡೆದ ವ್ಯಕ್ತಿ ನಾನಾಗಿದ್ದೇನೆ. ಆದರೆ, ದುರ್ದೈವ ಅಂದರೆ ರಾಜಕಾರಣದಲ್ಲಿ ನೇರವಾಗಿ ಮಾತನಾಡಬಾರದು. ಇಲ್ಲಿ ಚಮಚಾಗಿರಿ ಮಾಡಬೇಕು. ಆದರೆ, ನಾನು ಅದನ್ನು ಮಾಡೋದಿಲ್ಲ. ಹೀಗಾಗಿಯೇ ನಾನು ಹಿಂದೆ ಉಳಿದಿದ್ದೇನೆ ಎಂದರು.