ಬೆಳಗಾವಿ ನಗರದಿಂದಲೇ ನಮ್ಮ ಪಂಚಮಸಾಲಿ ಸತ್ಯಾಗ್ರಹ ಆರಂಭವಾಗಿದೆ. ಇದೇ ನಗರದಲ್ಲಿ ನಡೆಯುತ್ತಿರುವ ಅಧಿವೇಶನ ಮುಗಿಯುವುದರೊಳಗೆ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕನ್ನು ಕೊಡಬೇಕು. ನಾವು ಕೊಟ್ಟ ಗಡುವು, ನೀವು ಕೊಟ್ಟು ಗಡುವು ಎಲ್ಲವೂ ಮುಗಿದು ಹೋಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಪಡೆದುಕೊಳ್ಳಬೇಕು ಎಂದು ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮುದಾಯ ಮೀಸಲಾತಿಯಿಂದ ವಂಚಿತವಾಗಿ ಮಲಗಿದ್ದ ಸಂದರ್ಭದಲ್ಲಿ ಮೀಸಲಾತಿ ಎನ್ನುವ ಆ ವಿಚಾರವನ್ನು ಜನಾಂದೋಲನವಾಗಿ ರೂಪಿಸಿಕೊಂಡು ಮೀಸಲಾತಿ ಚಳುವಳಿಗೆ ಕಾವು ಕೊಟ್ಟಿದ್ದು ಇದೇ ಬೆಳಗಾವಿ ನಗರದಿಂದ ಎಂಬುದು ಹೆಮ್ಮೆಯ ವಿಚಾರವಾಗಿದೆ. ಹಿಂದುಳಿದ ವರ್ಗದ ಆಯೋಗದವರು ಬೆಳಗಾವಿಯಲ್ಲಿ ನವೆಂಬರ್ 10, 11, 12, 13ರಂದು ನಾಲ್ಕು ದಿನಗಳ ಕಾಲ ಸರ್ವೇ ಮಾಡಲು ಆಗಮಿಸಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸರ್ವೇ ಮಾಡಲು ಆಗಲಿಲ್ಲ. ಹೀಗಾಗಿ ಈಗಾಗಲೇ ಸಿದ್ಧವಾಗಿರುವ ವರದಿ, ಈಗಾಗಲೇ ತಾವು ಸಂಗ್ರಹಿಸಿರುವ ಅಂಕಿ ಅಂಶಗಳ ಆಧಾರದ ಮೇಲೆ. ಸರ್ಕಾರ ಮನಸ್ಸು ಮಾಡಿದ್ರೆ ದೊಡ್ಡ ಮಾತಲ್ಲ, ಎಲ್ಲಾ ಜಿಲ್ಲೆಗಳ ಹಿಂದುಳಿದ ವರ್ಗದ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿ ತಕ್ಷಣವೇ ವರದಿ ನೀಡುವಂತೆ ಸೂಚಿಸಿದ್ರೆ ಎಲ್ಲರೂ ಕೊಡುತ್ತಾರೆ. ಒಂದು ದಿನದಲ್ಲಿ ವರದಿ ಪಡೆಯಲು ನಿಮಗೆ ಅವಕಾಶವಿದೆ. ಆ ಕಾರಣಕ್ಕಾಗಿ ಬಹುಸಂಖ್ಯಾತ ಕಿತ್ತೂರು ಕರ್ನಾಟಕದ ಪಂಚಮಸಾಲಿ ಸಮಾಜದ ಜನರ ಬಹು ದಿವಸಗಳ ಹಕ್ಕೊತ್ತಾಯ ತಮ್ಮ ಅವಧಿಯಲ್ಲಿಯೇ ಈಡೇರುತ್ತೆ ಎಂಬ ಭರವಸೆ ಮೇಲೆ ನಿಮ್ಮ ಮಾತಿಗೆ ಬೆಲೆ ಕೊಟ್ಟು ಸತ್ಯಾಗ್ರಹ ಮುಂದಕ್ಕೆ ಹಾಕಿದ್ದೇವೆ. ಕೊನೆ ಪಕ್ಷ ವರದಿಯನ್ನು ಅಧಿವೇಶನದ ಒಳಗಾಗಿ ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.