ಬೆಂಗಳೂರು:ಯಾವುದೇ ಸಭೆ ಸಮಾರಂಭಗಳನ್ನು ಸರ್ಕಾರದ ನಿಯಮಾನುಸಾರ ಮಾಡಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಯಾರು ಹೈರಿಸ್ಕ್ ಏರಿಯಾದಿಂದ ಬಂದಿರುತ್ತಾರೋ ಅಂತವರಿಗೆ ಪಾಸಿಟಿವ್ ಕಂಡು ಬಂದರೆ ಅವರ ಸ್ಯಾಂಪಲ್ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಅವರು ಸೂಚಿಸಿದರು.
ಜೀನೋಮ್ ಸಿಕ್ವೆನ್ಸಿಂಗ್ ವರದಿ ಬರಲು 15ಕ್ಕೂ ಹೆಚ್ಚು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಸೋಂಕು ಕಾಣಿಸಿಕೊಂಡವರನ್ನು ಹೋಮ್ ಐಸೋಲೇಷನ್ನಲ್ಲಿರಿಸಿ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಹೇಳಿದರು.
ಸಧ್ಯ ಓಮ್ರಿಕಾನ್ ಕಾಣಿಸಿಕೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದು, ಪಾಸಿಟಿವ್ ಕಾಣಿಸಿಕೊಂಡಿರುವವರ ಸ್ಯಾಂಪಲ್ಗಳನ್ನು ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಗೌರವ್ ಗುಪ್ತಾ ತಿಳಿಸಿದರು.
ನಗರದಲ್ಲಿ ನಡೆದಿದ್ದ ಡಾಕ್ಟರ್ಗಳ ಸಮಾವೇಶದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಹೋಮ್ ಕ್ವಾರಂಟೈನ್ಗೆ ಸೂಚಿಸಲಾಗಿದೆ ಎಂದರು.
ಮಂತ್ರಿ ಮಾಲ್ನವರಿಗೆ ಹಲವಾರು ಬಾರಿ ಅವಕಾಶ ನೀಡಿದರೂ ಅವರು ಆಸ್ತಿ ತೆರಿಗೆ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಅವರು ವಿವರಿಸಿದರು.