ದಾವಣಗೆರೆ: ಜಮೀನು ವಿವಾದಕ್ಕೆ ಎರಡು ಗ್ರಾಮಗಳ ನಡುವೆ ಮಾರಾಮಾರಿ ಸಂಭವಿಸಿದೆ. ದೊಣ್ಣೆ, ಕುಡುಗೋಲುಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡು ಬಡಿದಾಡಿಕೊಂಡಿದ್ದಾರೆ.
ನ್ಯಾಮತಿ ತಾಲ್ಲೂಕಿನ ಕಂಚಿಕೊಪ್ಪ, ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂಬರ್ 29- 30 ರಲ್ಲಿ 40 ಎಕರೆ ಜಮೀನನಲ್ಲಿ ಉಳುಮೆ ಮಾಡುತ್ತಿದ್ದರು. ಇದು ತುಗ್ಗಲಹಳ್ಳಿ ಗ್ರಾಮದ ಗೋಮಾಳ ಜಾಗ ಅಂತ ಬೆಳೆ ನಾಶ ಮಾಡಲು ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೆ ಎರಡು ಗ್ರಾಮದ ಜನರ ನಡುವೆ ಗಲಾಟೆ ನಡೆದಿದೆ.
ಕಂಚಿಕೊಪ್ಪದ 13 ಜನ ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ವಿಡಿಯೋ ಭಾರೀ ವೈರಲ್ ಆಗಿದೆ.
ಜಮೀನು ಖಾತೆ ಮಾಡಿಕೊಡುವಂತೆ ಕಂಚಿಕೊಪ್ಪ ಗ್ರಾಮದ ದಲಿತ ಕುಟುಂಬಗಳು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ನಲ್ಲಿ ವ್ಯಾಜ್ಯ ಇರುವಾಗಲೆ ಗಲಾಟೆ ನಡೆದಿದೆ. ಹೊನ್ನಾಳಿ ಸಿಪಿಐ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.