ಬ್ರಹ್ಮಾವರ : ತಾಲೂಕಿನ ಉಗ್ಗೇಲ್ ಬೆಟ್ಟು ಎಂಬಲ್ಲಿ ಮಡಿಸಾಲು ಹೊಳೆಯಲ್ಲಿ ಈಜಲು ತೆರಳಿದ್ದ ಗೆಳೆಯರಿಬ್ಬರು ಮಂಗಳವಾರ ನೀರುಪಾಲಾಗಿದ್ದು, ಶವಗಳು ಬುಧವಾರ ಪತ್ತೆಯಾಗಿದೆ.
ಮೃತ ದುರ್ದೈವಿಗಳು ಶ್ರೇಯಸ್ (18) ಮತ್ತು ಅನಾಸ್ (16)ಎಂದು ತಿಳಿದು ಬಂದಿದೆ.
ಈಜಲು ತೆರಳಿದ್ದ ಮೂವರ ಪೈಕಿ ಇಬ್ಬರು ನೀರುಪಾಲಾಗಿದ್ದು, ಪಾರಾಗಿದ್ದ ಓರ್ವ ವಿಚಾರವನ್ನು ಯಾರಿಗೂ ಹೇಳದೆ ಗುಟ್ಟು ಮಾಡಿದ್ದ.
ನಾಪತ್ತೆಯಾದ ಇಬ್ಬರ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಂಗಳವಾರ ಸಂಜೆಯೇ ಬಾಲಕರು ನೀರುಪಾಲಾಗಿರುವ ವಿಚಾರವನ್ನು ಪೊಲೀಸರು ಖಚಿತಪಡಿಸಿಕೊಂಡು ನದಿಯಲ್ಲಿ ಹುಡುಕಾಟಕ್ಕಿಳಿದಿದ್ದರು. ಈಜು ಪಟು ಈಶ್ವರ್ ಅವರನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು.
ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.