ಬೆಂಗಳೂರು: ಸರಕಾರವು ದೇಶಿ ಗೋ ತಳಿ ಸಂವರ್ಧನೆಗಾಗಿ ರೈತರಿಗೆ ಕಡಿಮೆ ದರದಲ್ಲಿ ಕರುಗಳನ್ನು ವಿತರಣೆ ಮಾಡಲು ನಿರ್ಧರಿಸಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆ ಯಿಂದ ಜಾರಿಗೊಳ್ಳುತ್ತಿರುವ ಯೋಜನೆಗೆ “ಅಮೃತ ಸಿರಿ’ ಮತ್ತು “ಅಮೃತ ಧಾರಾ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಗಂಡು ಕರು ವಿತರಣೆಗೆ ಅಮೃತ ಧಾರಾ, ಹೆಣ್ಣು ಕರು ವಿತರಣೆಗೆ ಅಮೃತ ಸಿರಿ ಎಂದು ನಾಮಕರಣ ಮಾಡಲಾಗಿದ್ದು, ದೇಶಿ ತಳಿಗಳಾದ ಮಲೆನಾಡು ಗಿಡ್ಡ, ಹಳ್ಳಿಕಾರ್, ಅಮೃತ ಮಹಲ್ ಮತ್ತು ಕಿಲಾರಿ ತಳಿ ಅಭಿವೃದ್ಧಿಪಡಿಸಲು ಈ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ.
ರಿಯಾಯಿತಿ ದರದಲ್ಲಿ ಮಾರಾಟ
ರೈತರು ಮತ್ತು ಪಶುಪಾಲಕರಿಗೆ ಹೆಣ್ಣು ಕರುಗಳಿಗೆ ಶೇ. 75ರಷ್ಟು ರಿಯಾಯಿತಿ ಮತ್ತು ಗಂಡು ಕರುಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ಇಲಾಖೆ ನಿರ್ಧರಿಸಿದೆ.
ಕನಿಷ್ಠ 6 ತಿಂಗಳಿಂದ 2 ವರ್ಷದೊಳಗಿನ ಹೆಣ್ಣು ಮತ್ತು ಗಂಡು ಕರುಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದ್ದು, ಸುಮಾರು ಒಂದು ಸಾವಿರ ದೇಶಿ ತಳಿಗಳ ಕರುಗಳು ಇಲಾಖೆಯ ವ್ಯಾಪ್ತಿಯಲ್ಲಿ ಇವೆ ಎಂದು ಅಂದಾಜಿಸಲಾಗಿದೆ.
ಒಂದು ಕರುವಿನ ಬೆಲೆ ಅಂದಾಜು 10 ಸಾವಿರ ರೂ. ಎಂದು ಇಲಾಖೆ ನಿಗದಿಪಡಿಸಿ ಕೊಂಡಿದ್ದು, ಅದರ ಶೇ. 25ರಷ್ಟು ಅಂದರೆ, 2,500 ರೂ.ಗಳಿಗೆ ನೀಡಲು ಇಲಾಖೆ ತೀರ್ಮಾನಿಸಿದೆ. ಗಂಡು ಕರುಗಳನ್ನು ಕಡಿಮೆ ಬೆಲೆಗೆ ನೀಡಲು ತೀರ್ಮಾನಿಸಿದೆ. ವಯಸ್ಸಿನ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲೆನಾಡು ಗಿಡ್ಡ ತಳಿಗಳನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ರೈತರಿಗೆ ನೀಡಲು ಇಲಾಖೆ ನಿರ್ಧರಿಸಿದೆ.
ಅಮೃತಧಾರಾ ಯೋಜನೆ ಮೂಲಕ ಗಂಡು ಕರುಗಳನ್ನು ಹಾಗೂ ಅಮೃತ ಸಿರಿ ಯೋಜನೆ ಮೂಲಕ ಹೆಣ್ಣು ಕರುಗಳನ್ನು ರೈತರಿಗೆ ನೀಡುವ ವಿಶೇಷ ಯೋಜನೆಯನ್ನು ಪಶು ಸಂಗೋಪನೆ ಇಲಾಖೆ ರೂಪಿಸಿದೆ ದೇಶಿ ತಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡ ಲಾಗುತ್ತಿದ್ದು , ರೈತರು ಇದರ ಸದುಪಯೋಗ ವನ್ನು ಪಡೆದುಕೊಳ್ಳಬೇಕು.
-ಪ್ರಭು ಚೌವ್ಹಾಣ್,
ಪಶು ಸಂಗೋಪನೆ ಇಲಾಖೆ ಸಚಿವ.