ರಾಯಚೂರು: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ಮಣ್ಣಿನ ಮನೆ ಕುಸಿದು ಬಿದ್ದಿದ್ದು, 32 ವರ್ಷದ ಮಹಿಳೆ ಶಕುಂತಲಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಮನೆಯಲ್ಲಿ ಐದು ಜನ ಮಲಗಿದ್ದರು. ಈ ವೇಳೆ ಸತತ ಮಳೆಯಿಂದ ನೆನೆದಿದ್ದ ಮನೆ ಕುಸಿತವಾಗಿದೆ. ಮನೆ ಕುಸಿಯುವುದನ್ನು ಕಂಡು ಮೂವರು ಮಕ್ಕಳು ಹಾಗೂ ಸಾವನ್ನಪ್ಪಿದ ಮಹಿಳೆಯ ಪತಿ ಹೊರಗಡೆ ಬಂದಿದ್ದಾರೆ. ಮಹಿಳೆಯೂ ಎದ್ದು ಬರುವಾಗ ಅಷ್ಟರಲ್ಲೇ ಮನೆ ಕುಸಿದಿದೆ. ಮಹಿಳೆಯ ಮೇಲೆ ಮನೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆದು ಐದಾರು ಗಂಟೆಗಳಾದರೂ ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.