Home / ರಾಜಕೀಯ / ಸಲಗ ಚಿತ್ರವಿಮರ್ಶೆ: ರೌಡಿಸಂ ಲೋಕದ ‘ವಸ್ತುನಿಷ್ಠ ರಗಡ್’ ಅನಾವರಣ

ಸಲಗ ಚಿತ್ರವಿಮರ್ಶೆ: ರೌಡಿಸಂ ಲೋಕದ ‘ವಸ್ತುನಿಷ್ಠ ರಗಡ್’ ಅನಾವರಣ

Spread the love

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೃತ್ತಿ ಜೀವನಕ್ಕೆ ಬಹುದೊಡ್ಡ ಬ್ರೇಕ್ ಕೊಟ್ಟ ‘ಓಂ’ ಸಿನಿಮಾದಲ್ಲಿ ನಾಯಕ ಅನಿರೀಕ್ಷಿತವಾಗಿ ಮಚ್ಚು ಹಿಡಿದಿರುತ್ತಾನೆ. ಸಲಗದಲ್ಲಿ, ಪ್ರತೀಕಾರಕ್ಕಾಗಿ ಲಾಂಗ್ ಹಿಡಿಯುತ್ತಾನೆ. ದುನಿಯಾ ವಿಜಯ್ ಆಲಿಯಾಸ್ ವಿಜಯ್ ಕುಮಾರ್ ನಿರ್ದೇಶಿಸಿ, ನಟಿಸಿರುವ ಸಲಗ ಚಿತ್ರದ ಒನ್ ಲೈನ್ ಕಥೆಯಿದು.

‘ವರ್ಲ್ಡ್ ಯಾವ ಕಲರ್ ನಲ್ಲಿದ್ದರೇನು, ಅಂಡರ್ ವರ್ಲ್ಡ್ ಮಾತ್ರ ರೆಡ್ ಕಲರ್’ ಎನ್ನುವ ಡೈಲಾಗುಗಳು ಟೀಸರ್ ನಲ್ಲಿವೆ. ಸಲಗ ‘ಎ’ ಸರ್ಟಿಫಿಕೇಟ್ ಸಿನಿಮಾ. ಹಾಗಾಗಿ, ಚಿತ್ರದಲ್ಲಿ ಲಾಂಗ್ ಗಳು ಝಳಪಿಸುತ್ತವೆ, ರಕ್ತಗಳು ಹೆಪ್ಪುಗಟ್ಟುತ್ತವೆ, ತಲೆಗಳು ಚೆಂಡಿನಂತೆ ಉರುಳಾಡುತ್ತವೆ.

ಮಾಸ್ ಪ್ರೇಕ್ಷಕರನ್ನೇ ಟಾರ್ಗೆಟ್ ಮಾಡಿರುವ ಪಕ್ಕಾ ಸುಕ್ಕಾ/ರಾ ಸಿನಿಮಾವಿದು. ತಮಿಳಿನಲ್ಲಿ ಮಾತ್ರ ಇಂತಹ ಚಿತ್ರಗಳು ಬರುತ್ತವೆ ಎನ್ನುವ ‘ನಮ್ಮವರಿಗೆ’ ಈ ಚಿತ್ರ ಒಂದು ಉತ್ತರವಾಗಬಲ್ಲದು. ಯಾವ ಸನ್ನಿವೇಶವನ್ನೂ ಎಳೆದಾಡದೇ, ಅನಾವಶ್ಯಕ ಹಾಡು ತೂರಿಸದೇ 128 ನಿಮಿಷದಲ್ಲಿ ಸಿನಿಮಾ ಮುಗಿಸಿರುವ ನಿರ್ದೇಶಕ ವಿಜಯ್, ಚಿತ್ರವನ್ನು ಶ್ರದ್ದೆಯಿಂದ ತೆರೆಯ ಮೇಲೆ ತಂದಿದ್ದಾರೆ.

ಬೆಂಗಳೂರು ರೌಡಿ ಲೋಕದ ಕ್ರೌರ್ಯ, ಪೊಲೀಸ್ ವ್ಯವಸ್ಥೆ, ರೌಡಿ ಲೋಕದ ಜೊತೆಗೆ ರಾಜಕೀಯ ಧುರೀಣರಿಗೆ ಇರುವ ನಂಟನ್ನು ಗಂಟು ಕಟ್ಟಿ ಕೊಟ್ಟಿರುವ ನಿರ್ದೇಶಕರು, ಅಲ್ಲಲ್ಲಿ ಫ್ಯಾಮಿಲಿ ಅಟ್ಯಾಚ್ಮೆಂಟ್, ಭಾವನಾತ್ಮಕ ಟಚ್ ಅನ್ನೂ ನೀಡಿದ್ದಾರೆ. ಏನು ಸಲಗ ಸಿನಿಮಾದ ಕಥೆ, ತಾಂತ್ರಿಕವಾಗಿ ಸಿನಿಮಾ ಹೇಗಿದೆ?

ವಿಜಯ್ ಯಾಕೆ ಸಲಗ ಆಗುತ್ತಾನೆ ಎನ್ನುವುದೇ ಚಿತ್ರದ ಕಥೆ

ಉತ್ತರ ಕರ್ನಾಟದಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕ ವಿಜಯ್, ರೌಡಿಸಂ ಲೋಕದಲ್ಲಿ ಸಲಗ (ದುನಿಯಾ ವಿಜಯ್) ಎಂದೇ ಹೆಸರಾಗುತ್ತಾನೆ. ಇವನನ್ನು ಮಟಾಶ್ ಮಾಡಲು ಹೊಸ ಪಡೆಯನ್ನೇ ರಚಿಸುವ ಅನಿವಾರ್ಯತೆ ಬೆಂಗಳೂರು ಪೊಲೀಸರಿಗೆ ಬರುತ್ತದೆ. ಒಂದು ಕಡೆ ಪೊಲೀಸರು, ಇನ್ನೊಂದು ಕಡೆ ಸಲಗನನ್ನು ಹೊಡೆದಾಕಬೇಕು ಎನ್ನುವ ಇನ್ನೊಂದು ರೌಡಿ ಗ್ಯಾಂಗ್. ಇನ್ನೊಂದು ಕಡೆ ಸಲಗನ ಬಾಲ್ಯ ಸ್ನೇಹಿತೆ. ವಿಜಯ್ ಯಾಕೆ ಸಲಗ ಆಗುತ್ತಾನೆ ಎನ್ನುವುದೇ ಚಿತ್ರದ ಕಥೆ. ಮುಂದಿನದನ್ನು ಚಿತ್ರಮಂದಿರದಲ್ಲೇ ನೋಡಿ.. ಪೈರಸಿಗೆ ಜಾಡಿಸಿ ಒದಿಯಿರಿ..

ಸಲಗ ಈ ಪಟ್ಟಿಗಳ ಪೈಕಿ ಪ್ರತ್ಯೇಕವಾಗಿ ನಿಲ್ಲುವುದು ಚಿತ್ರದ ಮೇಕಿಂಗ್

 

ಈ ರೀತಿಯ ಸಿನಿಮಾಗಳು ಕನ್ನಡದಲ್ಲಿ ತುಂಬಾ ಬಂದಿವೆ. ಆದರೆ, ಸಲಗ ಈ ಪಟ್ಟಿಗಳ ಪೈಕಿ ಪ್ರತ್ಯೇಕವಾಗಿ ನಿಲ್ಲುವುದು ಚಿತ್ರದ ಮೇಕಿಂಗ್ ನಿಂದಾಗಿ. ಸನ್ನಿವೇಶಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ರಗಡ್ ಆಗಿ ನಿರ್ದೇಶಕರು ಚಿತ್ರವನ್ನು ತೆರೆಗೆ ತಂದಿದ್ದಾರೆ. ತಮ್ಮ ಮೊದಲ ನಿರ್ದೇಶನದ ಸಿನಿಮಾದಲ್ಲಿ ಭರವಸೆ ಮೂಡಿಸುವ ವಿಜಯ್ ಈ ಚಿತ್ರದ ನಾಯಕ ಕೂಡಾ. ಇಡೀ ಸಿನಿಮಾದಲ್ಲಿ ಗಮನಿಸಬೇಕಾದ ಅಂಶವೇನಂದರೆ, ವಿಜಯ್ ಅವರು ತಮಗಿಂತ ಹೆಚ್ಚಾಗಿ ಇತರ ಕಲಾವಿದರಿಗೆ ಸ್ಕ್ರೀನ್ ಪ್ರೆಸೆನ್ಸ್ ಅವಕಾಶ ಕೊಟ್ಟಿರುವುದು. ಹಾಗಾಗಿ, ಸಿಕ್ಕ ಅವಕಾಶವನ್ನು ಕಲಾವಿದರು ಭರ್ಜರಿಯಾಗಿಯೇ ಬಳಸಿಕೊಂಡಿದ್ದಾರೆ.

ಎಸಿಪಿ ಸಾಮ್ರಾಟ್ (ಡಾಲಿ ಧನಂಜಯ) ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ

 

ಇನ್ನು ಎಸಿಪಿ ಸಾಮ್ರಾಟ್ (ಡಾಲಿ ಧನಂಜಯ) ತಮಗೆ ಸಿಕ್ಕ ಪೊಲೀಸ್ ಅಧಿಕಾರಿಯ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಇವರ ಡೈಲಾಗ್ ಡೆಲಿವರಿ, ಮ್ಯಾನರಿಸಂ, ಬಾಡಿ ಲಾಂಗ್ವೇಜ್, ಪ್ರೇಕ್ಷಕರ ಭರಪೂರ ಶಿಳ್ಳೆಯನ್ನು ಗಿಟ್ಟಿಸುತ್ತದೆ. ಧನಂಜಯ್ ಮತ್ತು ದುನಿಯಾ ವಿಜಯ್ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಇವರ ಜೊತೆಗೆ ಸಾವಿತ್ರಿ (ಕಾಕ್ರೋಚ್ ಸುಧಿ), ಕೆಂಡ (ಶ್ರೇಷ್ಠ), ಕಮಿಷನರ್ (ಅಚ್ಯುತ್ ಕುಮಾರ್) ಕೂಡಾ ಉತ್ತಮವಾಗಿ ತನ್ನ ಪಾತ್ರವನ್ನು ನಿಭಾಯಿಸಿದ್ದಾರೆ.

ನಿಮ್ಮ ಅಕ್ಕಪಕ್ಕದವರೇ ನಿಮಗೆ ಮಹೂರ್ತ ಇಡುತ್ತಾರೆ

 

ನಿಮ್ಮ ಅಕ್ಕಪಕ್ಕದವರೇ ನಿಮಗೆ ಮಹೂರ್ತ ಇಡುತ್ತಾರೆ, ಪೊಲೀಸರು ನಿಮ್ಮ ನಿಜವಾದ ಶತ್ರುಗಳಲ್ಲ ಎಂದು ಹೇಳುವ ಎಸಿಪಿ ಸಾಮ್ರಾಟ್, ತಮ್ಮ ಇಲಾಖೆಯಲ್ಲಿರುವ ಹುಳುಕುಗಳ ಬಗ್ಗೆಯೂ ಪ್ರಸ್ತಾವಿಸುತ್ತಾರೆ. ಚಿತ್ರದಲ್ಲಿ ಈ ರೀತಿಯ ಆಪ್ತವಾಗುವ ಸನ್ನಿವೇಶಗಳು ತುಂಬಾ ಇದೆ. ರೌಡಿಸಂ ಲೋಕದ ಸಿನಿಮಾ ಆಗಿರುವುದರಿಂದ, ಅಕ್ಕ, ಅಮ್ಮ ಸೋ..ಮಗ, ಬೋ..ಮಗ ಪದಗಳನ್ನು ಬೀಪ್ ಇಲ್ಲದೇ ಬಳಸಲಾಗಿದೆ. ಮನೆಯಲ್ಲೂ ಆಡುಭಾಷೆಯಲ್ಲಿ ಇಂತಹ ಪದಗಳನ್ನು ಬಳಸುವವರಿಗೆ ಇದು ಸಹ್ಯವಾಗಬಹುದು. ಇಲ್ಲದಿದ್ದರೆ, ಇದು ಕಿರಿಕಿರಿಯಾಗಬಹುದು.

ಮಾಸ್ತಿಯವರ ಡೈಲಾಗುಗಳು ಚಿತ್ರದ ಪ್ಲಸ್ ಪಾಯಿಂಟ್

 

ಮಾಸ್ತಿಯವರ ಡೈಲಾಗುಗಳು ಚಿತ್ರದ ಪ್ಲಸ್ ಪಾಯಿಂಟ್. ಇನ್ನು, ಭೂಗತ ಲೋಕವನ್ನು ಶಿವಸೇನಾ (ಸಿನಿಮಾಟೋಗ್ರಾಫಿ) ಉತ್ತಮವಾಗಿ ತೋರಿಸಿದ್ದಾರೆ. ಕಲಾಸಿಪಾಳ್ಯ ಸೇರಿದಂತೆ, ಬೆಂಗಳೂರಿನ ಗಲ್ಲಿಗಳು ಹೀಗೂ ಇದೆಯಾ ಎಂದು ಆಶ್ಚರ್ಯ ಪಡುವಂತೆ ಕ್ಯಾಮರಾ ಕೆಲಸ ಮಾಡಿದೆ. ನಾಯಕನ ತಂದೆ-ತಾಯಿ ಪಾತ್ರ ಮಾಡಿದ ಸಂಪತ್ ಮತ್ತು ಉಷಾ, ನಾಯಕನ ಬಾಲ್ಯದ ಪಾತ್ರವನ್ನು ಮಾಡಿದ ಶ್ರೀಧರ್ ಅವರ ನಟನೆ ನೆನಪಿನಲ್ಲಿ ಉಳಿಯುತ್ತದೆ. ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ನೀನಾಸಂ ಅಶ್ವಥ್, ವಿಲನ್ ಆಗಿ ಕಾಣಿಸಿಕೊಂಡ ಯಶ್ ಶೆಟ್ಟಿ, ನಾಯಕಿ ಸಂಜನಾ ಆನಂದ್ ಅವರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಚಿತ್ರವನ್ನು ಸೀಟಿನಂಚಿನಲ್ಲಿ ಕೂರಿಸುವುದು ಬ್ಯಾಕ್ ಗ್ರೌಂಡ್ ಮ್ಯೂಸಿಕ್ – ಚರಣ್ ರಾಜ್

 

ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುವ ಹಾಗೇ, ಚಿತ್ರವನ್ನು ಸೀಟಿನಂಚಿನಲ್ಲಿ ಕೂರಿಸುವುದು ಬ್ಯಾಕ್ ಗ್ರೌಂಡ್ ಮ್ಯೂಸಿಕ್. ಸಂಗೀತ ನಿರ್ದೇಶಕ ಚರಣ್ ರಾಜ್. ಚಿತ್ರದ ಇನ್ನೊಬ್ಬರು ಹೀರೋ ಇವರೇ ಎಂದರೆ ತಪ್ಪಾಗಲಾರದು. ಚೇಸಿಂಗ್ ದೃಶ್ಯದಲ್ಲಂತೂ ಚರಣ್ ರಾಜ್ ನೀಡಿದ ಮ್ಯೂಸಿಕ್ ನೆಕ್ಸ್ಟ್ ಲೆವೆಲ್ ಅನ್ನಬಹುದು. ಪ್ರತಿಯೊಂದು ಸಿನಿಮಾಗಳಿಗೂ ಹೊಸ ರೀತಿಯ ಸಂಗೀತವನ್ನು ನೀಡುವ ಯುವ ಈ ಸಂಗೀತ ನಿರ್ದೇಶಕನಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದು ಎನ್ನುವ ಭರವಸೆಯನ್ನು ಇವರು ನೀಡುತ್ತಾರೆ. ಚಿತ್ರದ ನೆಗಟಿವ್ ಅಂಶ? ಮುಂದಿನ ಸ್ಲೈಡಿನಲ್ಲಿ

ಸಲಗ ಚಿತ್ರವಿಮರ್ಶೆ: ರೌಡಿಸಂ ಲೋಕದ ‘ರಗಡ್’ ಅನಾವರಣ

 

ಚಿತ್ರದಲ್ಲಿ ಹಲವು ನೆಗಟಿವ್ ಅಂಶಗಳೂ ಇವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ, ಸಲಗ ಅಷ್ಟು ದೊಡ್ಡ ರೌಡಿ ಸಾಮ್ರಾಜ್ಯವನ್ನು ಹೇಗೆ ಕಟ್ಟಿದ, ಅವನ ಪಟಾಲಂಗಳು ಯಾಕೆ ಅವನನ್ನು ಬಿಟ್ಟು ಕೊಡುವುದಿಲ್ಲ, ಚಿತ್ರದ ಒಟ್ಟಾರೆ ಸಾರಾಂಶವೇನು ಎನ್ನುವುದನ್ನು ಬಲವಾದ ದೃಶ್ಯಗಳ ಮೂಲಕ ತೋರಿಸುವಲ್ಲಿ ನಿರ್ದೇಶಕ ವಿಜಯ್ ಇನ್ನೂ ಪಳಗಬೇಕಿದೆ. ಚಿತ್ರಕ್ಕೆ ಭಾರೀ ಮೈಲೇಜ್ ಅನ್ನು ತಂದುಕೊಟ್ಟ ಟಿಣಿಂಗ ಟಿಣಿಂಗ ಟಿಸ್ಕಾ ಹಾಡನ್ನು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ಮಾತ್ರ ಬಳಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಚಿತ್ರದ ಬಗ್ಗೆ ಹೇಳುವುದಾದರೆ, ಈ ಫಾರ್ಮ್ಯಾಟಿನ ಮತ್ತು ಮಾಸ್ ಸಿನಿಮಾ ಬಯಸುವವರಿಗೆ ಸಲಗ ಚಿತ್ರ ಭರ್ಜರಿ ಬಾಡೂಟ ಕೊಡುವುದು ಗ್ಯಾರಂಟಿ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ