ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಡ್ರ್ಯಾಗನ್ ಮತ್ತೆ ಕಿರಿಕ್ ಮಾಡಿದ ಬೆನ್ನಲ್ಲೇ, ಭಾರತ ಮತ್ತು ಚೀನಾ ಮಧ್ಯೆ 13ನೇ ಬಾರಿಗೆ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆದಿದೆ. ಪೂರ್ವ ಲಡಾಖ್ನ ಲೈನ್ ಆಫ್ ಆಯಕ್ಚುವಲ್ ಕಂಟ್ರೋಲ್ನಲ್ಲಿ ಇರುವ ಸಮಸ್ಯೆಗಳನ್ನ ಪರಿಹರಿಸುವ ಸಂಬಂಧ ನಿನ್ನೆ ಎರಡೂ ದೇಶಗಳ ಕಮಾಂಡರ್ಗಳು ಮುಖಾಮುಖಿಯಾಗಿದ್ದವು.
ಆದರೆ ಈ ಮಾತುಕತೆಯಲ್ಲಿ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ನಾವು ನೀಡಿದ ಸಲಹೆಯನ್ನ ಚೀನಾ ಒಪ್ಪಿಕೊಳ್ಳಲಿಲ್ಲ ಎಂದು ಭಾರತ ಹೇಳಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತ.. ಎರಡೂ ದೇಶಗಳು ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬೇಕು ಎಂದು ಕಮಾಂಡರ್ ಲೇವಲ್ ಅಧಿಕಾರಿಗಳು ಮಾತುಕತೆಗೆ ಮುಂದಾಗಿದ್ದರು. ಆದರೆ ಚೀನಾದ ಕಡೆಯಿಂದ ಭಾರತದ ಸಲೆಹೆಯನ್ನ ಒಪ್ಪಿಕೊಳ್ಳಲು ತಯಾರಿಲ್ಲ. ಅಲ್ಲದೇ ನಮಗೆ ಯಾವುದೇ ಸಲಹೆಯನ್ನೂ ಕೂಡ ಚೀನಾ ನೀಡಲಿಲ್ಲ. ಇದರಿಂದ ಸಭೆಯಿಂದ ಯಾವುದೇ ನಿರೀಕ್ಷಿತ ಫಲಿತಾಂಶ ಹೊರ ಬಂದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಎರಡೂ ಕಡೆ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಮತ್ತು ಕಮ್ಯುನಿಕೇಷನ್ ಮೆಂಟೇನ್ ಮಾಡಿಕೊಳ್ಳುವ ಬಗ್ಗೆ ಒಪ್ಪಿಕೊಳ್ಳಲಾಗಿದೆ. ದ್ವಿಪಕ್ಷೀಯ ಸಂಬಂಧ ಒಪ್ಪಂದಗಳು ಮತ್ತು ಗಡಿಯಲ್ಲಿನ ಪ್ರೋಟೋಕಾಲ್ಗಳನ್ನ ಚಾಚುತಪ್ಪದೇ ಪಾಲನೆ ಮಾಡುವುದು ಮತ್ತು ಇತರೆ ಸಮಸ್ಯೆಗಳನ್ನ ಪರಿಹರಿಸಿಕೊಳ್ಳುವುದನ್ನ ಭಾರತ ನಿರೀಕ್ಷೆ ಮಾಡಿತ್ತು.
ಆದರೆ ದ್ವಿಪಕ್ಷೀಯ ಒಪ್ಪಂದಗಳನ್ನ ಉಲ್ಲಂಘನೆ ಮಾಡುವುದರ ಜೊತೆಗೆ ಯಥಾಸ್ಥಿತಿಯನ್ನ ಕಾಪಾಡಿಕೊಳ್ಳುವಲ್ಲಿ ಚೀನಾ ವಿಫಲವಾಗಿದೆ. ಗಡಿ ನಿಯಮ ಉಲ್ಲಂಘನೆಯನ್ನ ಚೀನಾ ಮತ್ತೆ ಮುಂದುವರಿಸಿದೆ ಎಂದು ಭಾರತ ಹೇಳಿದೆ.
ಈ ಸಭೆಯು ನಿನ್ನೆ ಬೆಳಗ್ಗೆ 10.30ರಿಂದ ಆರಂಭವಾಗಿ ಸಂಜೆ 7 ಗಂಟೆ ಸುಮಾರಿಗೆ ಮುಕ್ತಾಯಗೊಂಡಿದೆ. ಬರೋಬ್ಬರಿ ಎಂಟೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಯಾವುದೇ ನಿರೀಕ್ಷಿತ ಫಲಿತಾಂಶ ಬಾರದಿರೋದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ಪರ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಸಭೆಯ ನೇತೃತ್ವ ವಹಿಸಿದ್ದರು.