ಬೆಂಗಳೂರು: ಬಾಗಲುಗುಂಟೆ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ನಿಗೂಢವಾಗಿ ನಾಪತ್ತೆಯಾಗಿದ್ದ ಬಾಗಲುಗುಂಟೆಯಮಕ್ಕಳನ್ನ ಉಪ್ಪಾರಪೇಟೆ ಠಾಣೆ ಪೊಲೀಸರು ರಕ್ಷಿಸಿ, ಪೋಷಕರ ಆತಂಕ ದೂರ ಮಾಡಿದ್ದಾರೆ.
ಪೊಲೀಸರಿಗೆ ಸುಳಿವು ಕೊಟ್ಟ ಚಿಂದಿ ಆಯುವ ವ್ಯಕ್ತಿ
ನಂದನ್, ಕಿರಣ್, ಪರೀಕ್ಷಿತ್ ಎಂಬ ಮೂವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಈ ಮೂವರು ವಿದ್ಯಾರ್ಥಿಗಳು SSLC ವ್ಯಾಸಾಂಗ ಮಾಡುತ್ತಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿ ತೆರಳುತ್ತಿದ್ದ ಮಕ್ಕಳನ್ನ ಚಿಂದಿ ಆಯುವ ವ್ಯಕ್ತಿಯೊಬ್ಬ ನೋಡಿದ್ದಾನೆ ಎನ್ನಲಾಗಿದೆ. ಈತ ಪೊಲೀಸರಿಗೆ ನೀಡಿರುವ ಮಾಹಿತಿ ಆಧಾರದ ಮೇಲೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಇವರು ಬೆಳಗ್ಗೆ 7.30 ರ ಸುಮಾರಿಗೆ ಆನಂದ್ ರಾವ್ ಸರ್ಕಲ್ ಬಳಿಯಿರುವ ಹೋಟೆಲ್ಗಳಿಗೆ ತೆರಳಿ ಕೆಲಸ ಕೇಳುತ್ತಿದ್ದರು ಎನ್ನಲಾಗಿದೆ.
ಹೋಟೆಲ್ಗಳಲ್ಲಿ ಕೆಲಸ ಹುಡುಕಾಟ
ನಂತರ ಪೊಲೀಸರು ಅವರ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಶನಿವಾರ ಸಂಜೆ ಬಾಗಲುಗುಂಟೆ ಮನೆಯಿಂದ ಲೆಟರ್ ಬರೆದಿಟ್ಟು ಮಕ್ಕಳು ನಾಪತ್ತೆಯಾಗಿದ್ದರು. ಕಬ್ಬಡ್ಡಿ ಆಡಲಿಕ್ಕೆ ತುಂಬಾ ಇಷ್ಟ. ಅಪ್ಪ-ಅಮ್ಮ ನೀವು ಓದು ಅಂತೀರಾ. ನಾವು ಕಬ್ಬಡಿ ಆಟದಲ್ಲೇ ಹೆಸರನ್ನ ಮಾಡ್ತೀವಿ. ಕಬಡ್ಡಿ ಆಟವಾಡಿ ಹಣ ಸಂಪಾದನೆ ಮಾಡ್ತೀವಿ ಎಂದು ಮಕ್ಕಳು ಮನೆಬಿಟ್ಟು ತೆರಳಿದ್ದರು.
ನಂದನ್ ಹಾಗೂ ಪರೀಕ್ಷಿತ್ ಪೊಷಕರಿಗೆ ಲೆಟರ್ ಬರೆದಿಟ್ಟು ನಾಪತ್ತೆಯಾಗಿದ್ದರು. ಇವರಿಬ್ಬರ ಜೊತೆ ಕಿರಣ್ ತೆರಳಿದ್ದರು. ಬಾಗಲುಗುಂಟೆ ಸೌಂದರ್ಯ ಸ್ಕೂಲ್ನಲ್ಲಿ ಈ ಮೂವರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು. ಕಿರಣ್, ಪರೀಕ್ಷಿತ್ ಸೌಂದರ್ಯ ಸ್ಕೂಲ್ನಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ರು. ನಂದನ್ ಅದೇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ. ಶನಿವಾರ ಬೆಳಗ್ಗೆ 5.30ರ ಸುಮಾರಿಗೆ ಜಾಗಿಂಗ್ ಮಾಡಿ ಬರ್ತೀವಿ ಎಂದು ಮನೆಯಿಂದ ಹೊರಟು ಹೋಗಿದ್ದರು. ಬಾಗಲುಗುಂಟೆಯಿಂದ ಮೈಸೂರಿಗೆ ತೆರಳಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ.