ದಾವಣಗೆರೆ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರೋ ಪರಿಣಾಮ ಮನೆಯೊಂದು ಕ್ಷಣಾರ್ಧದಲ್ಲೇ ಕುಸಿದು ಮನೆಯಲ್ಲಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿರುವ ಘಟನೆ ಜಿಲ್ಲೆಯ ಐಗೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಗೊಲ್ಲರಹಟ್ಟಿಯ ಪಡಿತರ ಧಾನ್ಯ ವಿತರಕ ಸಿದ್ದಪ್ಪ ಎಂಬುವರ ಮನೆ ಕುಸಿತಗೊಂಡಿದ್ದು ಸಿದ್ದಪ್ಪ ದಂಪತಿ, ಇಬ್ವರು ಮಕ್ಕಳು ಹಾಗೂ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಐವರು ಕುಳಿತಿರುವಾಗ ನೋಡನೋಡುತ್ತಲೇ ಮನೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಧವಸ, ಧಾನ್ಯ, ಬಟ್ಟೆ, ಇತರೆ ಸಾಮಗ್ರಿಗಳು ಮಣ್ಣಲ್ಲಿ ಹೂತಿವೆ. ಜಿಲ್ಲೆಯಲ್ಲಿ ವಾರದಿಂದ ಭಾರೀ ಮಳೆ ಹಿನ್ನೆಲೆ ಇಲ್ಲಿವರೆಗೆ ತಾಲೂಕಿನಲ್ಲಿ ಸುಮಾರು 20 ಕ್ಕೂ ಹೆಚ್ಚು ಮನೆ ಕುಸಿತ ಕಂಡಿವೆ.