ಬೆಳಗಾವಿ: ‘ರಾಜ್ಯದಲ್ಲಿ ವಾರದೊಳಗೆ ಮಹತ್ವದ ಬದಲಾವಣೆಯಾಗಲಿದೆ. ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳಲಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಇಲ್ಲಿನ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ನಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೆರಳಲ್ಲ. ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಶಕ್ತಿ ಮತ್ತು ಅನುಭವ ಅವರಿಗಿದೆ. ಇನ್ನೊಂದು ವಾರದಲ್ಲಿ ಅವರು ಕೈಗೊಳ್ಳಲಿರುವ ಕ್ರಮವು ಅವರು ಮಾಜಿ ಮುಖ್ಯಮಂತ್ರಿಯ ನೆರಳಿನಲ್ಲಿ ಇಲ್ಲ ಎನ್ನುವುದನ್ನು ಸಾಧಿಸಲಿದೆ. ಕಾದು ನೋಡಿ’ ಎಂದು ಹೇಳಿದರು.
‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಮನಸ್ಸು ಮಾಡಲಿಲ್ಲ. ಅವರಿಗೆ ಸಮಾಜದ ಶಾಪ ತಟ್ಟಿತು. ಮಾಜಿ ಮುಖ್ಯಮಂತ್ರಿಯಾಗಿ, ಅಧಿವೇಶನದಲ್ಲಿ ನಮ್ಮ ಸಾಲಿನಲ್ಲಿ ಕೂರುವಂತಾಯಿತು’ ಎಂದರು.
‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಂದ ಕೂಡಲಸಂಗಮದಲ್ಲಿರುವ ಮಠ ಕಸಿದುಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅಲ್ಲಿಗೆ ಬೇರೊಬ್ಬರನ್ನು ತಂದು ಕೂರಿಸುವುದಕ್ಕೂ ಪ್ರಯತ್ನಗಳು ನಡೆದಿವೆ’ ಎಂದು ಆರೋಪಿಸಿದರು.