ಬೆಳಗಾವಿ: ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾಪುರಸೈಟ್ ಗ್ರಾಮದ ಶಾಕೀರ್ ಅಹ್ಮದ್ 583ನೇ ರ್ಯಾಂಕ್ ಪಡೆದಿದ್ದಾರೆ.
ಶಾಕೀರ್ ಅಹ್ಮದ್ ಅವರು 2014ರಲ್ಲಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರು. ಮತ್ತೆ 2015ರಲ್ಲಿ ಕೆಪಿಎಸ್ ಸಿ ಪರೀಕ್ಷೆ ಬರೆದು ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾಗಿ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಯುಪಿಎಸ್ ಸಿ ಪರೀಕ್ಷೆ ತೇರ್ಗಡೆಯಾಗಲು ಹಗಲು ರಾತ್ರಿ ಎನ್ನದೇ ಸಾಕಷ್ಟು ಜನ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಶಾಕೀರ್ ಅಹ್ಮದ್ ಅವರು ಸರ್ಕಾರಿ ಅಧಿಕಾರಿಯಾಗಿ ಕೆಲಸದಲ್ಲಿದ್ದುಕೊಂಡೇ ಓದಿ ಯುಪಿಎಸ್ ಸಿ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಶಾಕೀರ್ ಅವರ ತಂದೆ ಅಕ್ಬರ್ ಸಾಬ್ ತೋಂಡಿಖಾನ್ ಅವರು ಕೃಷಿ ಇಲಾಖೆಯ ನಿವೃತ್ತ ನೌಕರರಾಗಿದ್ದಾರೆ.