ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ಅಸ್ಪೃಶ್ಯತೆ ಜೀವಂತವಾಗಿ ಉಸಿರಾಡುತ್ತಿದೆ. ಇದಕ್ಕೆ ಉದಾಹರಣೆಯೇ ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ದೇವರ ದರ್ಶನಕ್ಕಾಗಿ ಹನುಮಂತ ದೇವರ ದೇವಸ್ಥಾನಕ್ಕೆ ಪ್ರವೇಶ ಮಾಡಿದ ದಲಿತ ಬಾಲಕನಿಗೆ ದಂಡ ವಿಧಿಸಿದ್ದಾರೆ. ಹೀಗಿರುವಾಗಲೇ ಅಸ್ಪೃಶ್ಯತೆ ನಿವಾರಣೆಗಾಗಿ ಕೊಪ್ಪಳ ಪೊಲೀಸರು ಪಣತೊಟ್ಟಿದ್ದಾರೆ.
ಹೌದು, ಇನ್ನೂ ಕೊಪ್ಪಳದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿಯೇ ಜಿಲ್ಲೆಯ ಹಳ್ಳಿ ಹಳ್ಳಿಗೂ ತೆರಳಿ ಅಸ್ಪೃಶ್ಯತೆ ನಿವಾರಣೆಗೆ ಪ್ರತಿಜ್ಞೆ ಮಾಡಿಸುತ್ತಿದ್ದಾರೆ. ಎಸ್ಪಿ ಟಿ. ಶ್ರೀಧರ್ ನೇತೃತ್ವದ ಪೊಲೀಸರ ತಂಡ ಹೊಸ ಪ್ರಯತ್ನ ಮಾಡುತ್ತಿದೆ.
ಇದರ ಮೊದಲ ಪ್ರಯತ್ನವಾಗಿ ಕೊಪ್ಪಳ ಪೊಲೀಸರು ಜಿಲ್ಲೆಯ ಬೇವಿನಾಳ ಗ್ರಾಮದಲ್ಲಿ ಅಗ್ರಗಣ್ಯ ಜಾತಿ ಮತ್ತು ದಲಿತರ ಸಭೆ ನಡೆಸಿದರು. ಸಭೆ ನಂತರ ಯಾವುದೇ ಕಾರಣಕ್ಕೂ ನಾವು ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲ. ಈ ಅಸ್ಪೃಶ್ಯತೆ ಎಂಬ ಅನಿಷ್ಟ ಪದ್ದತಿಯನ್ನು ತೊಲಗಿಸೋಣ. ಸಂವಿಧಾನದ ಆಶಯಗಳಿಗಾಗಿ ಕೆಲಸ ಮಾಡೋಣ ಎಂದು ಪ್ರತಿಜ್ಞೆ ಮಾಡಿಸಿದ್ದಾರೆ.